ಸತ ‘ಶಾಸಕ ರಮೇಶ ಜಾರಕಿಹೊಳಿ ಸಿ.ಡಿ. ಪ್ರಕರಣದಲ್ಲಿ ಮಹಾ ನಾಯಕನ ಹೆಸರನ್ನು ಸಂತ್ರಸ್ತೆಯೇ ಬಹಿರಂಗಗೊಳಿಸಿದ್ದಾರೆ. ಇದು ಅಚ್ಚರಿಯ ವಿಷಯವೇನಲ್ಲ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದರು.
‘ಸಾಮಾಜಿಕ ಜಾಲತಾಣದಲ್ಲಿ ಈ ಹೆಸರು ಈಗಾಗಲೇ ಪ್ರಸ್ತಾಪವಾಗಿತ್ತು. ಸಂತ್ರಸ್ತೆಯೇ ಇದೀಗ ‘ಮಹಾ ನಾಯಕನ’ ಹೆಸರೇಳಿದ್ದಾರೆ. ಅವರಿಗೆ ಯಾರಾದರೂ ಹೇಳಿಕೊಟ್ಟಿದ್ವಾ? ಸದನದಲ್ಲಿ ಮಂಚದ ವ್ಯವಹಾರ ಎಲ್ಲಿರಬೇಕು ಎಂದಿದ್ದವರ ಹುನ್ನಾರ ಇದರಲ್ಲೇನು? ಎಂಬ ಸತ್ಯಾಂಶ ಎಸ್ಐಟಿ ತನಿಖೆಯಿಂದ ಹೊರ ಬರಬೇಕಿದೆಯಷ್ಟೇ’ ಎಂದು ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.
‘ಎಸ್ಐಟಿ ತನಿಖೆ ನಡೆದಿದೆ. ಸಿ.ಡಿ. ಪ್ರಕರಣದ ಸ್ಕ್ರಿಪ್ಟ್ ರೈಟರ್ ಯಾರು? ಪ್ರೊಡ್ಯೂಸರ್ ಯಾರು? ಲೋಕೇಷನ್ ಎಲ್ಲಿಯದ್ದು? ಎಂಬುದು ಗೊತ್ತಾಗಬೇಕಿದೆ. ರಮೇಶ ಜಾರಕಿಹೊಳಿ ನಕಲಿ ಎಂದಿದ್ದಾರೆ. ಸಂತ್ರಸ್ತೆ ಗ್ರಾಫಿಕ್ಸ್ ಅಂದಿದ್ದಾರೆ. ದೇಶದಲ್ಲೇ ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರಿದೆ. ಯಾವ ಪ್ರಭಾವಕ್ಕೂ ಮಣಿಯದೆ ಸತ್ಯಾಂಶವನ್ನು ಪತ್ತೆ ಹಚ್ಚಲಿದ್ದಾರೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸೋಮಶೇಖರ್ ಪ್ರತಿಕ್ರಿಯಿಸಿದರು.
‘ಆರು ಸಚಿವರಿಗೆ ಉಪ ಚುನಾವಣೆಯ ಪ್ರಚಾರಕ್ಕೆ ಹೋಗಬೇಡಿ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂಬುದು ಕಪೋಲಕಲ್ಪಿತ. ನನಗೆ ಮಸ್ಕಿಯ ಜವಾಬ್ದಾರಿ ನೀಡಿದ್ದಾರೆ. ತಮಿಳುನಾಡಿನ ಊಟಿಯಲ್ಲಿ ಪ್ರಚಾರ ಮುಗಿಸಿದ ಬಳಿಕ ಮಸ್ಕಿಗೆ ಹೋಗುವೆ’ ಎಂದು ಸಹಕಾರ ಸಚಿವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.