ಮೈಸೂರು: ‘ಬಸವಾದಿ ಶರಣರ ತತ್ವ ಮತ್ತು ಆದರ್ಶಗಳನ್ನು ಪಾಲಿಸುವುದರಿಂದಭವಿಷ್ಯದಲ್ಲಿ ಭಾರತ ದೇಶವು ಉಜ್ವಲವಾಗಿ ಹೊರ ಹೊಮ್ಮುವಂತೆ ಮಾಡಬಹುದು’ ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜು ಹೇಳಿದರು.
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಬಳಗಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಬಸವ ತತ್ವ ಅನುಯಾಯಿಗಳು ಹಾಗೂ ಶರಣ ಧರ್ಮ ಪ್ರಚಾರಕ ವಿರಕ್ತ ಮಠಾಧೀಶರ ಒಕ್ಕೂಟ, ರಾಣಿ ಚನ್ನಮ್ಮ ಸ್ವಯಂ ಸೇವಾ ಸಂಘ, ಬಿಇಎಂಎಲ್ ಬಸವ ಸಮಿತಿ, ಗುಂಡ್ಲುಪೇಟೆ ತಾಲ್ಲೂಕು ಮಡಹಳ್ಳಿಯ ಗುರು ಬಸವ ಸೇವಾ ಸಮಿತಿಯ ಸಹಯೋಗದಲ್ಲಿ ನಗರದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬಸವ ಭಾರತ ಪ್ರತಿಷ್ಠಾನ ಹಾಗೂ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಜ್ಞಾನಿಗಳು, ಶಿಕ್ಷಿತರು ಸುಮ್ಮನೆ ಕುಳಿತುಕೊಳ್ಳುವುದು ದೇಶಕ್ಕೆ ದ್ರೋಹ ಬಗೆದಂತೆ ಆಗುತ್ತದೆ. ಪ್ರಜ್ಞಾವಂತರು ಹೊರ ಬಂದು ಸ್ಪಂದಿಸಬೇಕು. ಪ್ರಸ್ತುತ ಏನು ಅವಶ್ಯವಿದೆ ಎಂಬುದನ್ನು ಯುವಜನರಿಗೆ ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.
‘ಯುವಜನರಿಗೆ ಮೌಲ್ಯಯುತ ಆದರ್ಶಗಳನ್ನು ತಿಳಿಸುವ ಜವಾಬ್ದಾರಿ ಹಿರಿಯರ ಮೇಲಿದೆ’ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಬಸವಯೋಗಿ ಪ್ರಭು ಸ್ವಾಮೀಜಿ, ಹುಣಸೂರು ತಾಲ್ಲೂಕು ಮಾದಹಳ್ಳಿಯ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಜಿ.ಟಿ.ದೇವೇಗೌಡ, ತುಮಕೂರಿನ ಇಂದಿರಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ರೀಟಾ, ಬಸವ ಭಾರತ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ವಿ.ಶಿವರುದ್ರಪ್ಪ, ರೈತ ಮುಖಂಡ ಬ್ಯಾತಹಳ್ಳಿ ಮಾದಪ್ಪ, ಬಸವ ತತ್ವ ಪ್ರಚಾರಕ ಚೌಹಳ್ಳಿ ಲಿಂಗರಾಜಣ್ಣ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ವಿಜಯ ಕುಮಾರಿ ಎಸ್.ಕರಿಕಲ್, ಉಪನ್ಯಾಸಕ ದೇವರಾಜು ಪಿ.ಚಿಕ್ಕಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.