ADVERTISEMENT

ಅಂಬೇಡ್ಕರ್ ವಸತಿ ನಿಲಯದ ಅವ್ಯವಸ್ಥೆ: ವಿದ್ಯಾರ್ಥಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:55 IST
Last Updated 2 ಅಕ್ಟೋಬರ್ 2012, 4:55 IST

ಮಾನ್ವಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ವಿದ್ಯಾರ್ಥಿಗಳು ಸೋಮವಾರ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಹಿತರಕ್ಷಣಾ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪದವಿ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ವಾಸ ಮಾಡುತ್ತಿದ್ದು, ಈ ಎರಡು ಸಮುದಾಯಗಳ ವಿದ್ಯಾರ್ಥಿಗಳ ಮಧ್ಯ ಕ್ಷುಲ್ಲಕ ಕಾರಣಕ್ಕೆ ಜಗಳಗಳು ಸಂಭವಿಸುತ್ತಿವೆ.  ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಮೇಲೆ ಪ್ರತಿನಿತ್ಯ ದೌರ್ಜನ್ಯ ನಡೆಯುತ್ತಿವೆ.

ಸರ್ಕಾರದ ನಿಯಮದ ಪ್ರಕಾರ  ಸದರಿ ವಿದ್ಯಾರ್ಥಿ ನಿಲಯದಲ್ಲಿ  ಶೇ75ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ25ರಷ್ಟು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇರಬೇಕು. ಆದರೆ ನಿಯಮ ಉಲ್ಲಂಘಿ ಸಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಸಮಾಜ ಕಲ್ಯಾಣ ಅಧಿಕಾರಿಯೇ ನೇರ ಹೊಣೆ ಎಂದು ಧರಣಿನಿರತರು ದೂರಿದರು. ಈ ವಸತಿ ನಿಲಯವನ್ನು ಕೂಡಲೇ ಪ್ರತ್ಯೇಕಗೊಳಿಸಬೇಕು.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಬೇಕು.  ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ವಿದ್ಯಾರ್ಥಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಧರಣಿನಿರತರು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಹಿತರಕ್ಷಣಾ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕೆ.ಎಸ್.ನಾಗರಾಜ ನೀರಮಾನ್ವಿ, ಚಿನ್ನಪ್ಪ ಪಟ್ಟದಕಲ್, ಕೆ.ನಾಗಲಿಂಗಸ್ವಾಮಿ, ಪ್ರಭುರಾಜ ಕೊಡ್ಲಿ, ಆಕಾಶ ಮೇತ್ರಿ, ಅಶೋಕ ನಿಲೋಗಲ್ಕರ್, ನರಸಪ್ಪ ಜೂಕೂರು, ಲಕ್ಷ್ಮಣ ಜಾನೇಕಲ್, ಬಸವರಾಜ ಸುಂಕೇಶ್ವರ, ಪರಶುರಾಮ ಅರೋಲಿ, ನರಸಪ್ಪ ಜಾನೇಕಲ್, ವಿದ್ಯಾರ್ಥಿ ಮುಖಂಡರಾದ ಬಸವರಾಜ ಬಾಗಲವಾಡ, ಅಶೋಕ ತಡಕಲ್, ದೇವರಾಜ ನಕ್ಕುಂದಿ, ದುರುಗಪ್ಪ, ಚೆನ್ನಬಸವ, ಬಸಪ್ಪ ಅರೋಲೊ, ಜಾರ್ಜ್ ಮಾಡಗಿರಿ, ಭಗವಾನ್, ರವಿಕುಮಾರ, ವಿನಾಯಕ, ದತ್ತಾತ್ರೇಯ, ಕಾಶೀನಾಥ, ಪ್ರದೀಪ, ತಿಮ್ಮಯ್ಯ, ಬಸವರಾಜ ಜಂಬಲದಿನ್ನಿ, ಸಿದ್ದಪ್ಪ, ಭೀಮೇಶ, ಪ್ರಭಾಕರ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.