ಲಿಂಗಸುಗೂರ: ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅನುಷ್ಠಾನಾಧಿಕಾರಿಗಳು ಜನಸಾಮಾನ್ಯರ ತೊಂದರೆಗಳಿಗೆ ಸ್ಥಳೀಯವಾಗಿ ಸ್ಪಂದಿಸಬೇಕು. ಸ್ಪಂದಿಸದ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ಮಹಾದೇವಯ್ಯ ಎಚ್ಚರಿಕೆ ನೀಡಿದರು.
ಬುಧವಾರ ಇಂದಿರಾ ಆವಾಸ್ ಯೋಜನೆಯಡಿ 2008-09ನೇ ಸಾಲಿನಲ್ಲಿ ಪೂರ್ಣಗೊಂಡ ಮನೆಗಳಿಗೆ ಪಾವತಿಸಬೇಕಾಗಿದ್ದ ಬಾಕಿ ಹಣವನ್ನು 14 ಫಲಾನುಭವಿಗಳಿಗೆ ಪಾವತಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತರಿ ಯೋಜನೆಯಡಿ ನೀತಿ ನಿಯಮಗಳನ್ನು ಅನುಸರಿಸಬೇಕು. ಕೂಲಿಕಾರರ ಹಿತವನ್ನು ಕಾಪಾಡಬೇಕು. ಸಕಾಲದಲ್ಲಿ ಕಾನೂನಾತ್ಮಕ ತೊಡಕು ನಿವಾರಿಸಿ ಕೂಲಿಕಾರರಿಗೆ ಹಣ ಪಾವತಿಸಲು ಸೂಚಿಸಲಾಗಿದೆ ಎಂದರು.
ಗ್ರಾಕೂಸ್ ಸಂಘಟನೆ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಆರಂಭಿಸಿದ್ದ ಸತ್ಯಾಗ್ರಹದ ಶೇ. 90ರಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಶೇ.10ರಷ್ಟು ಬೇಡಿಕೆಗಳು ಬಾಕಿ ಉಳಿದಿವೆ. ಗುರುವಾರ ಮಧ್ಯಾಹ್ನದ ವೇಳೆಗೆ ಬಗೆ ಹರಿಸಲಾಗುವುದು. ಕೂಲಿಕಾರರ ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನ್ಯಾಯ ದೊರಕಿಸಿಕೊಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸಲಹೆ ನೀಡಲಾಗಿದೆ ಎಂದು ವಾಸ್ತವಾಂಶಗಳ ಬಗ್ಗೆ ವಿವರಣೆ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತಿಮ್ಮಣ್ಣ ನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.