ADVERTISEMENT

ತಾಂಡಾಗಳಲ್ಲಿ ನೀರಿನ ಸಮಸ್ಯೆ

ಬತ್ತಿರುವ ಜಲಮೂಲಗಳು, ಹಳ್ಳ ಹಿಡಿದಿರುವ ಯೋಜನೆಗಳು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:32 IST
Last Updated 30 ಮಾರ್ಚ್ 2018, 9:32 IST
ಲಿಂಬೇಪ್ಪನ ತಾಂಡಾದಲ್ಲಿ ಖಾಸಗಿ ವ್ಯಕ್ತಿಗಳ ತೆರೆದ ಬಾವಿಯಿಂದ ನೀರು ತರುತ್ತಿರುವ ಗ್ರಾಮಸ್ಥರು
ಲಿಂಬೇಪ್ಪನ ತಾಂಡಾದಲ್ಲಿ ಖಾಸಗಿ ವ್ಯಕ್ತಿಗಳ ತೆರೆದ ಬಾವಿಯಿಂದ ನೀರು ತರುತ್ತಿರುವ ಗ್ರಾಮಸ್ಥರು   

ಮುದಗಲ್: ತಲೆಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಪ್ಪನ ತಾಂಡಾ, ದಾದುಡಿ ತಾಂಡಾ ಸೇರಿದಂತೆ ಇನ್ನಿತರ ತಾಂಡಾಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಕುಡಿಯುವ ನೀರಿನ ಕಾಮಗಾರಿಗಳಿಗೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಆದರೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗೆ ಆಸರೆಯಾಗಿದ್ದ ಕೋಳವೆಬಾವಿ ಸೇರಿದಂತೆ ಇತರ ಜಲಮೂಲಗಳು ಬತ್ತಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ.

2014–15ರಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಅಡಿ ₹ 65 ಲಕ್ಷ ಮಂಜೂರು ಮಾಡಿ ಲಿಂಬೇಪ್ಪನ ತಾಂಡಾ ಹಾಗೂ ರಾಮಪ್ಪನ ತಾಂಡಾದ ಮಧ್ಯೆ ನೀರು ಸಂಗ್ರಹ ತೊಟ್ಟಿ ನಿರ್ಮಿಸಲಾಗಿದೆ.

ADVERTISEMENT

ಲಿಂಬೇಪ್ಪನ ತಾಂಡಾದ ಹಳ್ಳದಲ್ಲಿ ಕೋಳವೆಬಾವಿ ಕೊರೆಸಿ ಮೋಟಾರ್‌ ಅಳವಡಿಸುವುದರ ಜೊತೆಗೆ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಆದರೆ, ಎರಡು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೀರಿನ ಟ್ಯಾಂಕಿಗೆ ಪೈಪ್‌ಲೈಗಳನ್ನು ಸಹ ಅಳವಡಿಸಿಲ್ಲ ಎಂದು ಲಿಂಬೇಪ್ಪನ ತಾಂಡಾದ ರೆಡ್ಡಪ್ಪ, ತೇಜಪ್ಪ ಆರೋಪಿಸಿದ್ದಾರೆ.

ಎನ್.ಆರ್.ಡಬ್ಲ್ಯು.ಪಿ ಯೋಜನೆ ಅಡಿ ₹20 ಲಕ್ಷ ಖರ್ಚು ಮಾಡಿ ದಾದುಡಿ ತಾಂಡಾದಲ್ಲಿ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲಾಗಿದೆ. ಪ್ರತ್ಯೇಕ ವಿದ್ಯುತ್ ಪರಿವರ್ತಕ ಹಾಗೂ ಕೊಳವೆಬಾವಿಗೆ ಮೋಟಾರ್‌ ಅಳವಡಿಸಲಾಗಿದೆ. ಆದರೆ, ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ.

ಯರದೊಡ್ಡಿ ತಾಂಡಾದಲ್ಲಿಯೂ ಬೃಹತ್ ಟ್ಯಾಂಕ್ ನಿರ್ಮಿಸಿದರೂ ಯೋಜನೆ ಉಪಯೋಗಕ್ಕೆ ಬಾರದಂತಾಗಿದ್ದು, ತಾಂಡಾದ ಜನರು ಖಾಸಗಿ ವ್ಯಕ್ತಿಗಳ ತೋಟದಿಂದ ನೀರು ಖರೀದಿಸಿ ತರುತ್ತಿದ್ದಾರೆ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗಳು ಹಳ್ಳ ಹಿಡಿದಿವೆ. ಹಡಗಲಿ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್ ನಾಲ್ಕೇ ವರ್ಷದಲ್ಲಿ ಸೂರಲಾರಂಭಿಸಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕನಗೌಡ ದೂರಿದ್ದಾರೆ.

ಈವರೆಗೆ ಜಾರಿಗೆ ತಂದಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದರೆ ಜನರು ನೀರಿಗಾಗಿ ಪರದಾಡಬೇಕಿರಲಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾರಿ ಪರಿಗಣಿಸಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

**

ನೀರಿನ ಯೋಜನೆ ಹಾಗೂ ವಿದ್ಯುತ್ ಪರಿವರ್ತಕದ ಬಗ್ಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಪ್ರಸ್ತಾಪಿಸಿದರೂ ಅಧಿಕಾರಿಗಳು ಗಮನಹಸಿಲ್ಲ.

-ಶಾರದಾ ರಾಠೋಡ ಹಡಗಲಿ, ತಾ.ಪಂ ಸದಸ್ಯೆ

**

ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ಬಂದಿಲ್ಲ. ಕಿರಿಯ ಎಂಜಿನಿಯರ್‌ಗೆ ಸೂಚನೆ ನೀಡಿ ಸಮಸ್ಯೆ ಬಗೆ ಹರಿಸುತ್ತೇನೆ.

-ಅಬಿದಲಿ, ಎಇಇ, ಕುಡಿಯುನ ನೀರು ಸರಬರಾಜು ವಿಭಾಗ ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.