ಶಕ್ತಿನಗರ: ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಮತ್ತು ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ( ಆರ್ಟಿಪಿಎಸ್) ನೌಕರರ ಸಂಘಗಳ ಜಂಟಿ ಸಹಯೋಗದಲ್ಲಿ ಈಚೆಗೆ ನಡೆದ ಎರಡನೇ ಮಹಾಸಭೆಯಲ್ಲಿ ನೌಕರರ ವಿವಿಧ ಬೇಡಿಕೆಗಳ ಪರಿಹಾರದ ಪಟ್ಟಿಯನ್ನು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ ಅವರಿಗೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಪರಿಷ್ಕೃತ ವೇತನವನ್ನು ಹೊಸ ವೇತನ ಶ್ರೇಣಿಗಳಲ್ಲಿ ನಿಗದಿ ಮಾಡಬೇಕು. ಮನೆ ಬಾಡಿಗೆ ಭತ್ಯೆ, ರಿಮೋಟ್ ಏರಿಯಾ ಭತ್ಯೆ, ಅನ್ವೇಷಣಾ ಕ್ಷೇತ್ರ ಭತ್ಯೆ, ಪ್ಯಾಕೇಜ್ ಸೌಲಭ್ಯ, ವಿಕಲಚೇತನ ಭತ್ಯೆ, ಮಲೇರಿಯಾ ನಿರ್ಮೂಲನಾ ಭತ್ಯೆ, ರಿಸ್ಕ್ ಭತ್ಯೆ, ಪೋಲ್ ಕ್ಲೈಂಬಿಂಗ್ ಭತ್ಯೆ, ಲೆಕ್ಕಪತ್ರ ವಿಶೇಷ ಭತ್ಯೆ,ಸಾರಿಗೆ ಭತ್ಯೆ, ಶಿಕ್ಷಣ ಭತ್ಯೆ
ನೀಡಬೇಕು.
ಪಾಳಿ ಭತ್ಯೆಯ ದರವನ್ನು ಶೇ 10ಕ್ಕೆ ಹೆಚ್ಚಿಸಬೇಕು. ಪಾಳಿಗಳ ಗರಿಷ್ಠ ಮಿತಿಯನ್ನು ತೆಗೆದು ಹಾಕಬೇಕು. ಆರ್ಟಿಪಿಎಸ್, ಬಿಟಿಪಿಎಸ್, ವೈಟಿಪಿಎಸ್ನಲ್ಲಿನ ದೂಳು ಭತ್ಯೆಯನ್ನು ಹೆಚ್ಚಿಸಬೇಕು. ಉಷ್ಣತಾ ಭತ್ಯೆಯನ್ನು ₹1,500 ಸಾವಿರಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮಟ್ಟದಲ್ಲಿ ಒತ್ತಡ ಹಾಕಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಆರ್ಟಿಪಿಎಸ್ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ, ಕೆಪಿಸಿಎಲ್ ನೌಕರರ ಸಂಘದ ಅಧ್ಯಕ್ಷ ಚಂದ್ರು ಚೋಟಣ್ಣನವರ್, ವಿವಿಧ ನೌಕರರ ಸಂಘದ ಪದಾಧಿಕಾರಿಗಳಾದ ತಿಪ್ಪಣ್ಣ, ಉರುಕುಂದಪ್ಪ, ಖಾಜಾಹುಸೇನ, ಜಿ.ಸಿದ್ಧಪ್ಪ, ರವೀಂದ್ರ, ನಾಗರಾಜ ಬಾಳೆ, ಮಧುಸೂಧನ್, ಉಮೇಶಭಜಂತ್ರಿ, ಮಹಾದೇವ ಸೂರ್ಯವಂಶಿ, ಮಾರೆಪ್ಪ, ಟಿ.ಸೂಗಪ್ಪ, ಸತ್ಯನಾಥ, ಶ್ರೀನಿವಾಸದಳಪತಿ, ನಜೀರ್ಅಹ್ಮದ್, ಮಾರೆಪ್ಪ, ಸೂಗಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.