ADVERTISEMENT

ಮಕ್ಕಳ ಕಳ್ಳರ ವದಂತಿ ನಂಬದಿರಲು ಮನವಿ

ಗ್ರಾಮೀಣ ಪ್ರದೇಶದಲ್ಲಿ ಪೊಲೀಸರಿಂದ ಕರಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 9:53 IST
Last Updated 22 ಮೇ 2018, 9:53 IST

ಜಾಲಹಳ್ಳಿ: ‘ಕಳೆದೊಂದು ವಾರದಿಂದ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ನಂಬದಿರಿ. ವದಂತಿ ಸಂಪೂರ್ಣ ಸುಳ್ಳು’ ಎಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶಂಕ್ರಪ್ಪ ತಿಳಿಸಿದರು.

ಸೋಮವಾರ ಪಟ್ಟಣದಲ್ಲಿ ನಡೆಯುವ ವಾರದ ಸಂತೆ ನಿಮಿತ್ತ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ರೀತಿಯ ಮಾಹಿತಿ ಹೊಂದಿರುವ ಕರಪತ್ರಗಳನ್ನು ವಿತರಿಸಿದರು. ಜಾಗೃತಿ ಮೂಡಿಸಿದರು.

‘ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಕ್ಕಳ ಕಳ್ಳರು ಬಂದಿರುವುದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ತಮಗೆ ಬಂದಿರುವ ಪ್ರತಿಯೊಂದು ಸಂದೇಶವನ್ನು ಇನ್ನೂಬ್ಬರಿಗೆ ರವಾನಿಸುತ್ತಿದ್ದಾರೆ.ಇಂತಹ ಸಂದೇಶಗಳಿಂದ ಯಾರಿಗಾದರೂ ಪ್ರಾಣ ಹಾನಿಯಾದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ಜನ ಜಾಗರಣೆ ಮಾಡುವಂತಾಗಿದೆ. ಇಂತಹ ಪ್ರಕರಣಗಳು ಜಿಲ್ಲೆಯ ಯಾವುದೇ ಠಾಣೆಯಲ್ಲಿ ದಾಖಲಾಗಿಲ್ಲ. ಜನರು ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು ಎಂದು ತಿಳಿಸಿದರು.

ಗ್ರಾಮಗಳಲ್ಲಿ ಅಥವಾ ಓಣಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಕಂಡುಬಂದರೆ ಅಂತಹವರ ಬಗ್ಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಮಾಹಿತಿಗೆ ಪೊಲೀಸರನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 94808 03859.

ಮಸ್ಕಿ: ಪೊಲೀಸರಿಂದ ಜಾಗೃತಿ

ಮಸ್ಕಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಕ್ಕಳ ಅಪಹರಣ ನಡೆಯುತ್ತಿದೆ ಎಂಬುದು ವದಂತಿ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಚನ್ನಯ್ಯ ಹಿರೇಮಠ ತಿಳಿಸಿದ್ದಾರೆ.

ಭಾನುವಾರ ಪ್ರಕಟಣೆ ನೀಡಿರುವ ಅವರು ‘ಮಕ್ಕಳ ಅಪಹರಣ ವದಂತಿಯಿಂದಾಗಿ ಗೌಡನಭಾವಿಮ ನಂಜಲದಿನ್ನಿ, ಬುದ್ದಿನ್ನಿ, ಬಳಗಾನೂರು, ರಂಗಾಪುರ, ಹಸ್ಮಕಲ್ ಮುಂತಾದ ಗ್ರಾಮಗಳಲ್ಲಿ ಅಪರಿಚಿತ ವ್ಯಕ್ತಿಗಳನ್ನು ಕೂಡಿಹಾಕಿ ಹಲ್ಲೆ ಮಾಡಿದ ವರದಿಗಳು ಬಂದಿವೆ’ ಎಂದರು.

‘ಮಕ್ಕಳನ್ನು ಅಪಹರಿಸಲು ಕಳ್ಳರು ಗುಂಪು ಬಂದಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ನೆರೆಯ ಠಾಣೆಗಳ ಪೊಲೀಸ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ರಾತ್ರಿ ಹಳ್ಳಿಗಳಲ್ಲಿ ಪೊಲೀಸ್ ಗಸ್ತನ್ನು ಬಲ ಪಡಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ನೋಡಿ ಯಾರೂ ಗಾಬರಿ ಪಡಬೇಕಾಗಿಲ್ಲ’ ಎಂದು ಮನವಿ ಮಾಡಿದ್ದಾರೆ. ಗ್ರಾಮಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.