ರಾಯಚೂರು: ಜಿಲ್ಲೆಯಲ್ಲಿ ರಾಯಚೂರು ತಾಲ್ಲೂಕು ಹಾಗೂ ದೇವದುರ್ಗ ತಾಲ್ಲೂಕು ಹೊರತುಪಡಿಸಿದರೆ ಮಳೆ ಆರ್ಭಟ ಇನ್ನುಳಿದ ತಾಲ್ಲೂಕಿನಲ್ಲಿ ಕಡಿಮೆ ಆಗಿದೆ. ರಾಯಚೂರು ನಗರ ಮತ್ತು ತಾಲ್ಲೂಕಿನಲ್ಲಿ ಮಳೆ ಧಾರಾಕಾರ ಸುರಿದಿದೆ.
ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಪೋತಗಲ್ ಗ್ರಾಮದ ಕೆರೆ ಕಟ್ಟೆ ಒಡೆದು ನೀರು ಹರಿದು ಪೋಲಾಗಿದೆ. ಚಂದ್ರಬಂಡಾ ಗ್ರಾಮದ ಹತ್ತಿರ ದಕ್ಷಿಣ ಮಧ್ಯ ರೈಲ್ವೆ ವಿಭಾಗವು ಗದ್ವಾಲ ರೈಲ್ವೆ ಮಾರ್ಗ ನಿರ್ಮಾಣದ ಭಾಗವಾಗಿ ಚಂದ್ರಬಂಡಾ ರೈಲ್ವೆ ನಿಲುಗಡೆ ತಾಣ ನಿರ್ಮಾಣ ಮಾಡಿದೆ. ಇದಿನ್ನೂ ಉದ್ಘಾಟನೆ ಆಗಿಲ್ಲ. ರೈಲು ಸಂಚಾರ ಈ ಮಾರ್ಗದಲ್ಲಿ ಆರಂಭಗೊಂಡಿಲ್ಲ. ಆದರೆ ಗುರುವಾರ ರಾತ್ರಿ ಸುರಿದ ಮಳೆಗೆ ರೈಲು ಹಳಿ ಪಕ್ಕ ಹಾಕಿದ ಮಣ್ಣು ಕೊಚ್ಚಿ ಹೋಗಿದ್ದು, ಅಪಾಯದ ಮುನ್ಸೂಚನೆ ನೀಡಿದೆ.
ಸೆಪ್ಟೆಂಬರ್ 25ಕ್ಕೆ ಸಿಕಂದರಾಬಾದ್ ನ ದಕ್ಷಿಣ ಮಧ್ಯರೈಲ್ವೆ ವಿಭಾಗ ತಾಂತ್ರಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಬಳಿಕ ಈ ರೈಲು ಮಾರ್ಗದಲ್ಲಿ ರಾಯಚೂರು–ಗದ್ವಾಲ್ ಮಾರ್ಗದಲ್ಲಿ ರೈಲು ಸಂಚರಿಸಲಿವೆ. ಅಷ್ಟರಲ್ಲಿಯೇ ರೈಲ್ವೆ ಹಳಿಗೆ ಹಾಕಿದ ಮಣ್ಣು ಕೊಚ್ಚಿ ಹೋಗಿದೆ.
ಜಿಲ್ಲಾ ಪಂಚಾಯಿತಿ ಎಂಜಿನಿಯರ್ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮನ್ಸಲಾಪುರ ರಸ್ತೆ ಹದಗೆಟ್ಟಿದ್ದರಿಂದ ಗುರುವಾರ ಸ್ಥಗಿತಗೊಳಿಸಲಾಗಿದ್ದ ಭಾರಿ ವಾಹನ ಸಂಚಾರ ಪುನಃ ಆರಂಭಗೊಂಡಿದೆ. ಬೈಪಾಸ್ ರಸ್ತೆಯ ರೈಲ್ವೆ ಸೇತುವೆಯನ್ನು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಮಳೆ ಪ್ರಮಾಣ: ದೇವದುರ್ಗ– 61.4 ಮಿ.ಮೀ, ಜಾಲಹಳ್ಳಿ–13.5 ಮಿ.ಮೀ, ಸಿಂಧನೂರು ತಾಲ್ಲೂಕಿನ ಸಾಲಗುಂದ–33 ಮಿ.ಮೀ, ಸಿಂಧನೂರು–14.7 ಮಿ.ಮೀ, ಹೆಡಗಿನಾಳ– 14 ಮಿ.ಮೀ, ಮಾನ್ವಿ ತಾಲ್ಲೂಕು ಕುರ್ಡಿ– 13, ಮಲ್ಲಟ– 13, ರಾಯಚೂರು ತಾಲ್ಲೂಕಿನಲ್ಲಿ ಯರಗೇರಾ–19 ಮಿ.ಮೀ, ಯರಮರಸ್– 14 ಮಿ.ಮೀ, ಚಂದ್ರಬಂಡಾ– 15 ಮಿ.ಮೀ, ಜೇಗರಕಲ್– 5.2 ಮಿ.ಮೀ, ರಾಯಚೂರು ನಗರ– 7 ಮಿ.ಮೀ ಮಳೆ ಆಗಿದೆ ಎಂದು ಜಿಲ್ಲಾಡಳಿತ ಕಚೇರಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.