ADVERTISEMENT

ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 8:50 IST
Last Updated 13 ಜನವರಿ 2012, 8:50 IST

ರಾಯಚೂರು: ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು  ಜಿಲ್ಲಾಧಿಕಾರಿಗಳ ಕಚೇರಿ ಗುರುವಾರ ಎದುರು ಪ್ರತಿಭಟನೆ ನಡೆಸಿದರು.

ಭಯೋತ್ಪಾದನೆ ಹತ್ತಿಕ್ಕುವ  ಬದಲಾಗಿ ಸಂಘ ಪರಿವಾರದ ಅಂಗ ಸಂಸ್ಥೆಗಳ ಕಾರ್ಯಕರ್ತರೇ ರಾಜ್ಯಾದ್ಯಂತ ಕೋಮು ಸೌಹಾರ್ದತೆಯನ್ನು ಕೆದಕಿ ಹುಬ್ಬಳ್ಳಿ, ಸಿಂದಗಿ ಮತ್ತು ದತ್ತಪೀಠ ಸೇರಿದಂತೆ ಮುಂತಾದ ಕಡೆಗಳಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ 70 ಸಾವಿರ ವಿದ್ಯಾರ್ಥಿಗಳಿಗೆ  ವರ್ಷಕ್ಕೆ 10 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಆದರೆ, ಬಿಜೆಪಿ ರಾಜ್ಯ ಸರ್ಕಾರವು ಯುವಕರ ಏಳ್ಗೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ ಎಂದು ದೂರಿದರು.

ಮಠ ಮಾನ್ಯಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಕೊಡುವ ಬದಲಾಗಿ ವಿದ್ಯಾರ್ಥಿಗಳಿಗೆ ಯುವಕರಿಗೆ ಹಾಗೂ ಕ್ರೀಡಾಪಟುಗಳಿಗೆ ಭತ್ಯೆ ನೀಡಿ ಪ್ರೋತ್ಸಾಹಿಸಬೇಕು. ಆದರೆ, ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಹೇಳುವ ಮಾತುಗಳನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಟೀಕಿಸಿದರು.

ಒಂದು ಲಕ್ಷ ಉದ್ಯೋಗಾವಕಾಶಗಳನ್ನು ನೀಡುತ್ತೇವೆ ಎಂದು ಬಿಜೆಪಿ ಸರ್ಕಾರವು ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿದ್ದರೂ ಅವುಗಳನ್ನು ಮರೆತು ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆಪಾದಿಸಿದರು.

ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿಗಳನ್ನು ವಶಪಡಿಸಿಕೊಂಡ ಈ ಸರ್ಕಾರವು  ಹೊಸ ಕೈಗಾರಿಕೆಗಳನ್ನು ನಿರ್ಮಿಸಿ ಲಕ್ಷಾಂತರ ಯುವಕರಿಗೆ ಉದ್ಯೋಗದ ಭರವಸೆ ನೀಡಿತ್ತು. ಸರ್ಕಾರ ಈಗ ಸಾವಿರಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿ ಭೂ ಕಬಳಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.

ರಾಯಚೂರು ಲೋಕಸಭಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಯುವ ಮುಖಂಡ ರವಿ ಬೋಸರಾಜ್, ಉಪಾಧ್ಯಕ್ಷ ಶಕೀಲ್ ಅನ್ಸಾರಿ, ಪ್ರಧಾನ ಕಾರ್ಯದರ್ಶಿಗಳಾದ ಕೆ ಗೋಪಿ, ರಾಜೇಶ್, ಶಾಂತು, ಮುರುಳಿ ಯಾದವ್, ಪ್ರಶಾಂತ, ರಘುನಂದನ್, ಅಂಜಿ ಯಾದವ್, ವೈ.ಎಸ್ ಅಶೋಕ ಪೋತಗಲ್, ಗ್ರಾಮೀಣ ಯುವ ಘಟಕದ ಶಿವಶರಣಗೌಡ, ಅಮರೇಶ್ವರರೆಡ್ಡಿ, ನೀತಿರಾಜ್, ಮರಿಸ್ವಾಮಿ, ಸುರೇಶ ಕುಲಕರ್ಣಿ, ಎಸ್ ನರಸಪ್ಪ,ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ವಸಂತಕುಮಾರ, ಶಾಸಕ ಸಯ್ಯದ್,
 
ನಗರ ಘಟಕದ ಅಧ್ಯಕ್ಷ ಜಿ.ಬಸವರಾಜರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಿ.ಚಂದ್ರಶೇಖರರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಅಸ್ಲಾಂ ಪಾಷಾ,  ಜಿಪಂ ಮಾಜಿ ಸದಸ್ಯ ಬಷೀರುದ್ದೀನ್, ರವೀಂದ್ರ ಜಲ್ದಾರ್, ನರಸನಗೌಡ ಲೋಕಸಭಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶರಣ, ನಗರಸಭೆ ಸದಸ್ಯರಾದ ಜಯಣ್ಣ, ಕೆ.ಶಾಂತಪ್ಪ, ಜಿ.ಶಿವಮೂರ್ತಿ ಹಾಗೂ ಜಿ.ಸುರೇಶ  ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.