ಮಸ್ಕಿ: ಗ್ರಾಮೀಣ ಹಾಗೂ ಪಟ್ಟಣದ ರಸ್ತೆಗಳ ಅಭಿವೃದ್ಧಿ ಸರ್ಕಾರ ಮೊದಲ ಆದ್ಯತೆ ನೀಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಮೆರನಾಳ ಗ್ರಾಮದಲ್ಲಿ ಭಾನುವಾರ ₹ 2,60 ಕೋಟಿ ವೆಚ್ಚದಲ್ಲಿ ಕೈಗೊಂಡ ಮಸ್ಕಿ ಹಂಚಿನಾಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಮಸ್ಕಿ-ಸಿಂಧನೂರು ಹೆದ್ದಾರಿಯಿಂದ ತುಂಗಭದ್ರಾ ಎಡದಂಡೆ ಕಾಲುವೆ ಮೇಲೆ ತುರ್ವಿಹಾಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 22 ಕಿಮೀ ರಸ್ತೆಯಲ್ಲಿ ₹2.25 ಕೋಟಿ ವೆಚ್ಚದಲ್ಲಿ 5 ಕಿಮೀ ಹಾಗೂ ₹ 2.60 ಕೋಟಿ ವೆಚ್ಚದಲ್ಲಿ 6 ಕೀ.ಮಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಉಳಿದ 11 ಕಿ.ಮೀ ರಸ್ತೆಯನ್ನು ಎರಡನೇ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ರಸ್ತೆ ನಿರ್ಮಾಣದಿಂದ ಮಸ್ಕಿಯಿಂದ ತುರ್ವಿಹಾಳ, ತಾವರಗೇರಾ ಮೂಲಕ ಹುಬ್ಬಳ್ಳಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಲೋಕೋಪಯೋಗಿ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆಗೆ ರಸ್ತೆ ಕಾಮಗಾರಿಯನ್ನು ವಹಿಸಲಾಗಿದೆ. ಗುಣಮಟ್ಟದ ರಸ್ತೆ ಮಾಡುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಕಳೆದ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ಸರ್ಕಾರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಿದೆ. ಕುಡಿವ ನೀರು, ಶಾಲೆ, ವಿದ್ಯುತ್, ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಿದೆ. ಮಾದರಿ ಕ್ಷೇತ್ರ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ" ಎಂದರು
ಜಿಲ್ಲಾ ಪಂಚಾಯಿತಿ ಸದಸ್ಯ ದುರಗಪ್ಪ ಗುಡಗಲದಿನ್ನಿ, ತಾಲ್ಲೂಕು ಪಂಚಾಯಿತಿ ಸದಸ್ಯ ಈಶಪ್ಪ ದೇಸಾಯಿ, ಮಲ್ಲನಗೌಡ ಪೊಲೀಸ್ ಪಾಟೀಲ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜಸ್ವಾಮಿ, ಗೋವಿಂದಪ್ಪ ನಾಯಕ, ಜಲಸಂಪನ್ಮೂಲ ಇಲಾಖೆಯ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ್, ಇತರರು ಇದ್ದರು.
**
ತುಂಗಭದ್ರಾ ಎಡದಂಡೆ ಕಾಲುವೆ ಮೇಲಿನ ರಸ್ತೆ ಡಾಂಬರೀಕರಣ ಮಾಡುವುದರಿಂದ ಮಸ್ಕಿಯಿಂದ ತುರ್ವಿಹಾಳಕ್ಕೆ ತೆರಳುವ ಜನರಿಗೆ ಅನುಕೂಲವಾಗಲಿದೆ. ಹಂತ ಹಂತವಾಗಿ ಈ ರಸ್ತೆ ನಿರ್ಮಾಣವಾಗಲಿದೆ
- ಪ್ರತಾಪಗೌಡ ಪಾಟೀಲ, ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.