ADVERTISEMENT

ವಿದ್ಯುತ್‌ ತಂತಿ ತಗುಲಿ ಯುವಕ ಸಾವು, 13 ಮಕ್ಕಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 10:31 IST
Last Updated 12 ಏಪ್ರಿಲ್ 2018, 10:31 IST

ಲಿಂಗಸುಗೂರು: ಮಸ್ಕಿ ತಾಲ್ಲೂಕಿನ ತೆರೆಬಾವಿ– ಬುದ್ದಿನ್ನಿ ನಡುವೆ ವಿದ್ಯುತ್‌ ತಂತಿ ತಗುಲಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಯುವಕ ಮೃತಪಟ್ಟು , 13 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.ದಾವೂದ್‌ಇಬ್ರಾಹಿಂ ಮೋದಿನಸಾಬ‌್ (19) ಮೃತಪಟ್ಟಿದ್ದು, ಗಾಯಗೊಂಡ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ  ದಾಖಲಿಸಲಾಗಿದೆ.

‘ತಾಲ್ಲೂಕಿನ ಮಟ್ಟೂರು ಗ್ರಾಮದಿಂದ ಅಮರೇಶ್ವರ ಗ್ರಾಮಕ್ಕೆ ಮದುವೆಗೆ ತೆರಳುತ್ತಿದ್ದಾಗ ಲಾರಿ ಚಾಲಕನ ನಿರ್ಲಕ್ಷ್ಯದಿಂದ ವಿದ್ಯುತ್‌ ತಂತಿ ತಗುಲಿದೆ. ಗಾಯಗೊಂಡಿರುವ ಎಲ್ಲರೂ ಮಟ್ಟೂರು ಗ್ರಾಮದವರಾಗಿದ್ದು 10 ರಿಂದ 14 ವಯಸ್ಸಿನವರಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿವೈಎಸ್ಪಿ ಎಸ್‌.ಎಚ್‌. ಸುಬೇದಾರ, ಮಸ್ಕಿ ಸಿಪಿಐ ಚೆನ್ನಯ್ಯ ಹಿರೇಮಠ, ಮುದಗಲ್‌ ಪಿಎಸ್‌ಐ ಚಿತ್ತರಂಜನ್‌ ಆಸ್ಪತ್ರೆಗೆ ಭೇಟಿ ನೀಡಿದರು. ಲಿಂಗಸುಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಆಕ್ರಂದನ: ದಾವೂದ್‌ ಇಬ್ರಾಹಿಂ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಬಂದ ಕುಟುಂಬದವರು, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಮೋದಿನಸಾಬ್ ಅವರ ಮೂವರು ಗಂಡು ಮಕ್ಕಳ ಪೈಕಿ  ದಾವೂದ್‌ ಇಬ್ರಾಹಿಂ ಹಿರಿಯ ಮಗ. ಬಿ.ಎ ಓದುತ್ತಿದ್ದ. ಸ್ನೇಹಿತರ ಜೊತೆ ಮದುವೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಮಗನನ್ನು ಶವವಾಗಿ ನೋಡುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.