ADVERTISEMENT

ಸಮಸ್ಯೆ ಪರಿಹಾರಕ್ಕೆ ಶಿಕ್ಷಕರ ಮನವಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 8:44 IST
Last Updated 17 ಜುಲೈ 2013, 8:44 IST

ಮಾನ್ವಿ: ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನೇಮಕಗೊಂಡಿರುವ ತಾಲ್ಲೂಕಿನ ಶಿಕ್ಷಕರು ಮಂಗಳವಾರ  ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವಿ.ಸ್ವಾಮಿಗೆ ಮನವಿ ಸಲ್ಲಿಸಿದರು.

ಮೂರು ತಿಂಗಳಾದರೂ ಸಂಬಳ ನೀಡಿಲ್ಲ. ವಾರ್ಷಿಕ ವೇತನ ಮುಂಬಡ್ತಿಯಲ್ಲಿ ಹಲವು ಲೋಪದೋಷಗಳನ್ನು ಎಸಗಲಾಗಿದೆ. ಎಚ್‌ಆರ್‌ಎಂಎಸ್‌ಗಾಗಿ ಸ್ವಂತ ಹಣ 200ರೂಪಾಯಿ ನೀಡಿದ್ದು ಕೆಲಸವಾಗಿಲ್ಲ. ಎನ್‌ಪಿಎಸ್ ಯೋಜನೆ ಅನುಷ್ಠಾನದಲ್ಲಿ ವೇತನದಲ್ಲಿ ಪಡೆಯಲಾದ ಹಣದ ಬಡ್ಡಿಯ ಬಗ್ಗೆ ಮಾಹಿತಿ ಇಲ್ಲ. ದಿನಭತ್ಯೆ ಹಣ ಬಿಡುಗಡೆ ಹಾಗೂ ಗಳಿಕೆ ವೇತನ ನಗದೀಕರಣ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಪ್ರತಿಯೊಂದು ಕೆಲಸಕ್ಕೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಂಚ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಶಿಕ್ಷಕರು ದೂರಿದರು.

  ಎಸ್‌ಎಸ್ ಎ ಶಿಕ್ಷಕರ ಬಗ್ಗೆ ತಾರತಮ್ಯ ನೀತಿ ಅನುಸರಿಸದೆ ಎಲ್ಲಾ ಶಿಕ್ಷಕರಂತೆ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಪ್ರತಿ ತಿಂಗಳು ಮೊದಲ ವಾರದಲ್ಲಿಯೇ ಕಡ್ಡಾಯವಾಗಿ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಶೈಲಗೌಡ, ಖಜಾಂಚಿ ಆರೀಫ್‌ಮಿಯಾ ಚಾಗಬಾವಿ, ಶಿಕ್ಷಕ ಮಕ್ಬೂಲ್ ಅಹ್ಮದ್ ನೀರಮಾನ್ವಿ ಸೇರಿದಂತೆ  ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನೇಮಕಗೊಂಡಿರುವ ತಾಲ್ಲೂಕಿನ ಹಲವಾರು ಶಾಲೆಗಳ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.