ರಾಯಚೂರು: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ದಶಮಾನೋತ್ಸವ ಮತ್ತು ಜಾಗೃತಿ ಸಮಾವೇಶವನ್ನು ಜನವರಿ 12ರಂದು ಆಯೋಜಿಸಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಕೆ.ಎಂ ರಾಮಚಂದ್ರಪ್ಪ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು– ನೆಲ ಮಂಗಲ ರಸ್ತೆಯ ‘ಮಾಧವರ’ ದಲ್ಲಿ ನಡೆಯಲಿದೆ. ಮೈಸೂರು ನೈಸ್ ಜಂಕ್ಷನ್ ಹತ್ತಿರ ಇರುವ ಈ ಸ್ಥಳದಲ್ಲಿ ನಡೆಸಲಾಗುತ್ತಿದೆ. ಈ ಮೊದಲು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಸುವ ಯೋಜನೆ ಇತ್ತು. ನಂತರ ಸ್ಥಳ ಬದಲಾವಣೆ ಮಾಡಲಾಗಿದೆ ಎಂದರು.
ದಶಮಾನೋತ್ಸವ ಹಾಗೂ ಜನಜಾಗೃತಿ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಎಚ್. ಆಂಜನೇಯ, ಸಂಸತ್ ಸದಸ್ಯರು, ಶಾಸಕರು, ಹಿಂದುಳಿದ ವರ್ಗಗಳ ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಅದೇ ದಿನ ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷ ಹಾಗೂ ಇತರೆ ಪಕ್ಷಗಳ ಮುಖಂಡರು, ಸಂಸದರು, ಶಾಸಕರು, ಪರಿಷತ್ ಸದಸ್ಯರು ಪಾಲ್ಗೊಳ್ಳುವರು. ರಾಜ್ಯದಲ್ಲಿ ಇರುವ ಹಿಂದುಳಿದವರ ಅಸ್ತಿತ್ವ ಮತ್ತು ಏಕತೆ ತೋರಿಸುವ ಆಶಯದಿಂದ ಈ ಮಹತ್ವದ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರ 5–6 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಮೀಸಲಾತಿ ಕಬಳಿಕೆ ತಡೆಗೆ ಒತ್ತಾಯ: ರಾಜ್ಯದಲ್ಲಿ ಹಿಂದುಳಿದ ಜಾತಿಗಳಲ್ಲಿ 203 ಜಾತಿಗಳಿವೆ. ಪ್ರವರ್ಗ–1, ಪ್ರವರ್ಗ–2 ಹಿಂದುಳಿದ ಜಾತಿ ಪಟ್ಟಿಗೆ ಬರುತ್ತವೆ. ರಾಜ್ಯದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ 40ರಷ್ಟು ಜನಸಂಖ್ಯೆ ಹಿಂದುಳಿದ ಜಾತಿಗಳದ್ದಾಗಿದೆ. ಆದರೆ, ಮೀಸಲಾತಿ ಕಲ್ಪಿಸುವಲ್ಲಿ ಬೇರೆ ಬೇರೆ ವರ್ಗದವರು ಮೀಸಲಾತಿ ಕಬಳಿಸಿದ್ದಾರೆ. ಮೀಸಲಾತಿ ಕಬಳಿಕೆ ತಡೆಯಬೇಕು. ಹಿಂದುಳಿದ ಜಾತಿಗಳ ಹೆಸರಿನ ನಕಲಿ ಪ್ರಮಾಣ ಪತ್ರ ಪಡೆದು, ಸರ್ಕಾರಿ ಉದ್ಯೋಗ, ಸೌಲಭ್ಯ, ರಾಜಕೀಯ ಪ್ರಾತಿನಿಧ್ಯ ಪಡೆಯಲಾಗುತ್ತಿದೆ.
ಇಂಥದ್ದನ್ನೆಲ್ಲ ಸರ್ಕಾರ ತಡೆಯಬೇಕು ಎಂದು ಸಮಾವೇಶದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಹಿಂದುಳಿದ ಜಾತಿ ಸಮುದಾಯಕ್ಕೆ ಸರ್ಕಾರದಿಂದ ಜನಸಂಖ್ಯೆ ಮಾನದಂಡ ಪ್ರಕಾರ ಸವಲತ್ತು ಸಿಗುತ್ತಿಲ್ಲ. ಈಗ ಹಿಂದುಳಿದ ವರ್ಗದವರೇ ಮುಖ್ಯಮಂತ್ರಿಯಾಗಿದ್ದು, ಜಾತಿ ಜಗಣತಿಗೆ ಆದೇಶಿಸಿ ಇದಕ್ಕೆ ಹಣವನ್ನೂ ಬಿಡುಗಡೆ ಮಾಡಿದ್ದಾರೆ. ಜಾತಿ ಗಣತಿ ಬಳಿಕ ಹಿಂದುಳಿದ ಜಾತಿಗಳ ಜನಸಂಖ್ಯೆ ಸ್ಪಷ್ಟ ಮಾಹಿತಿ ದೊರಕಲಿದೆ. ಆ ಜನಸಂಖ್ಯೆ ಪ್ರಮಾಣಕ್ಕೆ ತಕ್ಕಂತೆ ಸರ್ಕಾರ ಹಿಂದುಳಿದ ಜಾತಿಗಳ ಜನತೆಗೆ ಸರಿಯಾದ ಮೀಸಲಾತಿ, ಸರ್ಕಾರದ ಸವಲತ್ತು ಕೊಡಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ಜಾತಿ ಹೆಸರಲ್ಲಿ ನಕಲಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸವಲತ್ತು ಕಬಳಿಕೆ ಮಾಡಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಸಮಾವೇಶದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಹೇಳಿದರು. ದಶಮಾನೋತ್ಸವ ಹಿನ್ನೆಲೆಯಲ್ಲಿ ಈಗ ಬೆಂಗಳೂರಲ್ಲಿ ಹಿಂದುಳಿದ ಜಾತಿ ಜಾಗೃತಿಗೆ ಸಮಾವೇಶ ಮತ್ತು ದಶಮಾನೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ವಿಭಾಗವಾರು, ಜಿಲ್ಲಾ ಮತ್ತು ತಾಲ್ಲೂಕುವಾರು ಸಮಾವೇಶ ನಡೆಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಇ. ಆಂಜನೇಯ, ಎಂ ಈರಣ್ಣ, ಜಯವಂತರಾವ್ ಪತಂಗೆ, ಎ ಮಾರೆಪ್ಪ, ಪುಟ್ಟಸ್ವಾಮಿ, ಎಣ್ಣೆಗೆರೆ ಆರ್ ವೆಂಕಟರಾಮಯ್ಯ, ನೀಲಕಂಠ ಬೇವಿನ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.