ರಾಯಚೂರು: ಜಿಲ್ಲೆಯ ಲಿಂಗಸುಗೂರು ಮತ್ತು ರಾಯಚೂರು ತಾಲ್ಲೂಕುಗಳ ಆರು ನಡುಗಡ್ಡೆ ಪ್ರದೇಶಗಳಲ್ಲಿ ಒಟ್ಟು 298 ಕುಟುಂಬಗಳು ವಾಸಿಸುತ್ತಿದ್ದು, ಸದ್ಯ ಪ್ರವಾಹ ಪರಿಸ್ಥಿತಿ ಇರುವುದರಿಂದ ಎಲ್ಲ ಕುಟುಂಬಗಳಿಗೂ ಆಹಾರ ಸಾಮಗ್ರಿಗಳನ್ನು ವಿತರಿಸಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ.
ಲಿಂಗಸುಗೂರು ತಾಲ್ಲೂಕಿನ ಓಂಕಾರಗಡ್ಡಿ, ಹಾರಲಗಡ್ಡಿ ಹಾಗೂ ಕರಕಲಗಡ್ಡಿಯ 14 ಕುಟುಂಬದವರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ. ಪ್ರವಾಹ ಹೆಚ್ಚಳದಿಂದ ಸಮಸ್ಯೆ ಎದುರಿಸುವ ರಾಯಚೂರು ತಾಲ್ಲೂಕಿನ ಕುರ್ವಕುಲಾ, ಅಗ್ರಹಾರ ಹಾಗೂ ಕುರ್ವಕುರ್ದಾ ನಡುಗಡ್ಡೆ ಪ್ರದೇಶಗಳ 298 ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಒದಗಿಸುವುದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯ ಒಟ್ಟು ಆರು ನಡುಗಡ್ಡೆ ಪ್ರದೇಶಗಳಲ್ಲಿ 1,049 ಜನರು ವಾಸಿಸುತ್ತಿದ್ದಾರೆ. ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರತಿದಿನ ಜನರಿಗೆ ತಿಳಿವಳಿಕೆ ಮೂಡಿಸುತ್ತಿದ್ದು, ನದಿತೀರಕ್ಕೆ ಬರದಂತೆ ಸೂಚಿಸಲಾಗಿದೆ.
ಸದ್ಯ ಕೃಷ್ಣಾನದಿಯಲ್ಲಿ 2.36 ಲಕ್ಷ ಕ್ಯುಸೆಕ್ ನೀರು ಹರಿದು ಹೋಗುತ್ತಿದ್ದು, ಶನಿವಾರ ರಾತ್ರಿಯಿಂದ ಈ ಪ್ರಮಾಣವು ಮೂರು ಲಕ್ಷಕ್ಕೆ ಏರಿಕೆಯಾಗಲಿದೆ. ಕೃಷ್ಣಾನದಿಗೆ ಅಡ್ಡಲಾಗಿ ನಾಲ್ಕು ಕಡೆಗಳಲ್ಲಿ ವಾಹನ ಸಂಚಾರದ ಪ್ರಮುಖ ಸೇತುವೆಗಳಿವೆ. ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಈಗಾಗಲೇ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ.
2.5 ಲಕ್ಷ ಕ್ಯುಸೆಕ್ಗೆ ನೀರು ಹೆಚ್ಚಳವಾದರೆ ಲಿಂಗಸುಗೂರಿನ ಯರಗೋಡಿ ಮತ್ತು ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆಗಳು ಮುಳುಗಡೆಯಾಗುತ್ತವೆ. ನೀರಿನ ಪ್ರವಾಹವು ನಾಲ್ಕು ಕ್ಯುಸೆಕ್ ದಾಟಿದರೆ ರಾಯಚೂರು ತಾಲ್ಲೂಕಿನ ದೇವಸುಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಸೇತುವೆ ಮುಳುಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.