ADVERTISEMENT

17ರಂದು ಮ್ಯಾರಾಥಾನ್: ಚಾಲನೆ ನೀಡಲಿರುವ ನಟ ದಿಗಂತ, ನಟಿ ಐಂದ್ರಿತಾ ರೈ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 14:41 IST
Last Updated 13 ಫೆಬ್ರುವರಿ 2019, 14:41 IST

ರಾಯಚೂರು: ಭಾರತೀಯ ವೈದ್ಯಕೀಯ ಸಂಘದ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಆರೋಗ್ಯದ ರಕ್ಷಣೆಯ ಜಾಗೃತಿ ಮೂಡಿಸಲು ಫೆಬ್ರುವರಿ 17ರಂದು ಆಯೋಜಿಸಿರುವ ಆರೋಗ್ಯಕ್ಕಾಗಿ ಮ್ಯಾರಾಥಾನ್ ಓಟಕ್ಕೆ ಸಿನಿಮಾ ನಟ ದಿಗಂತ ಹಾಗೂ ನಟಿ ಐಂದ್ರಿತಾ ರೈ ಚಾಲನೆ ನೀಡಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಡಾ.ಸುರೇಶ ಸಗರದ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಮೂರು ವಿಭಾಗಗಳಲ್ಲಿ 2, 5 ಹಾಗೂ 10 ಕಿ.ಮೀ. ಓಟ ಸಂಘಟಿಸಲಾಗುತ್ತಿದೆ. ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಗ್ರಾಮವೊಂದನ್ನು ದತ್ತು ಪಡೆಯಲು ಚಿಂತನೆ ನಡೆಸಲಾಗಿದೆ ಎಂದರು.

ಶಾಸಕರಾದ ಡಾ.ಶಿವರಾಜ ಪಾಟೀಲ, ರಾಜೂಗೌಡ, ಮ್ಯಾಕ್ಸ್ ಪ್ರಾಪರ್ಟೀಸ್‌ ನಿರ್ದೇಶಕ ದಯಾನಂದ, ಜಿಲ್ಲಾಧಿಕಾರಿ ಬಿ.ಶರತ್, ಪೊಲೀಸ್ ಅಧೀಕ್ಷಕ ಡಿ.ಕಿಶೋರಬಾಬು, ಆರೋಗ್ಯಾಧಿಕಾರಿ ಡಾ.ಎಂ.ಕೆ.ಎಸ್.ನಸೀರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

1940–41ರಲ್ಲಿ ರಾಯಚೂರು ವೈದ್ಯಕೀಯ ಸಂಘವನ್ನು ಸ್ಥಾಪನೆ ಮಾಡಲಾಗಿದ್ದು, ರಕ್ತ ಭಂಡಾರ, ರಕ್ತ ಸಂಸ್ಕರಣೆ ಹಾಗೂ ವರ್ಗೀಕರಣ ಘಟಕವನ್ನು ಎರಡು ದಶಕಗಳಿಂದ ನಿರ್ವಹಿಸಲಾಗುತ್ತಿದೆ. ಅಲ್ಲದೇ ಜೈವಿಕ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಆರಂಭಿಸಿರುವು ಹೆಮ್ಮೆಯಿದೆ ಎಂದರು.

ಐಎಂಎ ಅಧ್ಯಕ್ಷ ಡಾ.ಮಹಾಲಿಂಗಪ್ಪ ಮಾತನಾಡಿದರು. ಡಾ.ಶೈಲೇಶ ಅಮರಖೇಡ, ಡಾ.ಅನಿರುದ್ಧ ಕುಲಕರ್ಣಿ, ಡಾ.ರವಿರಾಜೇಶ್ವರ, ಡಾ.ರಾಜೇಶ ಕಕ್ಕೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.