ADVERTISEMENT

ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 13:48 IST
Last Updated 6 ಅಕ್ಟೋಬರ್ 2022, 13:48 IST
ಮಾನ್ವಿ ಪುರಸಭೆಯ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ರಜನಿಕಾಂತ ಚೌಹಾಣ ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆಯನ್ನು ಗುರುವಾರ ನಡೆಸಿದರು
ಮಾನ್ವಿ ಪುರಸಭೆಯ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ರಜನಿಕಾಂತ ಚೌಹಾಣ ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆಯನ್ನು ಗುರುವಾರ ನಡೆಸಿದರು   

ಮಾನ್ವಿ: ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆ ಉಪವಿಭಾಗಾಧಿಕಾರಿ ರಜನಿಕಾಂತ ಚೌಹಾಣ ನೇತೃತ್ವದಲ್ಲಿ ಗುರುವಾರ ನಡೆಯಿತು.

ಪುರಸಭೆಗೆ ಸೇರಿದ ಒಟ್ಟು 51 ವಾಣಿಜ್ಯ ಮಳಿಗೆಗಳ ಪೈಕಿ ಅಂಚೆ ಕಚೇರಿ ಹತ್ತಿರದ 8 ಮಳಿಗೆಗಳಿಗೆ ಕೆವಲ ಇಬ್ಬರು ಹಾಗೂ ಪುರಸಭೆ ಕಚೇರಿ ಹತ್ತಿರದ 3 ಮಳಿಗೆಗಳಿಗೆ ಯಾರೂ ಕೂಡ ಅರ್ಜಿ ಸಲ್ಲಿಸದ ಕಾರಣ ಒಟ್ಟು 11 ಮಳಿಗೆಗಳ ಹರಾಜು ನಡೆಯಲಿಲ್ಲ.

ಪಟ್ಟಣದ ಬಸ್ ನಿಲ್ದಾಣದ ಹತ್ತಿರದ 40 ಮಳಿಗೆಗಳಿಗೆ 51 ಜನರು ಅರ್ಜಿಯನ್ನು ಸಲ್ಲಿಸಿದ್ದ ಕಾರಣ ಅರ್ಜಿದಾರರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ಸುಗಮವಾಗಿ ನಡೆಯಿತು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ರಜನಿಕಾಂತ ಚೌಹಾಣ, ‘ಪಟ್ಟಣದ ಜನರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸುವ ಹೊಣೆ ಪುರಸಭೆಯ ಮೇಲಿದೆ. ಪುರಸಭೆಯ ಆಸ್ತಿಗಳಿಂದ ಅದಾಯವನ್ನು ಸೃಜಿಸಿಕೊಂಡಾಗ ಮಾತ್ರ ಪಟ್ಟಣದ ನಿವಾಸಿಗಳಿಗೆ ಉತ್ತಮವಾದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರು, ಪುರಸಭೆಯ ಮಳಿಗೆಗಳ ಬಾಡಿಗೆ ಕುರಿತು ಬಹಿರಂಗ ಹರಾಜು ಪ್ರಕ್ರಿಯೆಗೆ ಕ್ರಮ ಕೈಗೊಂಡಿದ್ದಾರೆ. ಪುರಸಭೆಗೆ ಅದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಇಂದು ಮಳಿಗೆಗಳ ಬಹಿರಂಗ ಹರಾಜು ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಹಶೀಲ್ದಾರ್ ಚಂದ್ರಕಾಂತ್ , ಜಿಲ್ಲಾ ಪ್ರವಾಸೋದ್ಯಮ ಆಯುಕ್ತ ಜಿಲಾನಿ ಕುರ್ಡಿ,ಪುರಸಭೆಯ ಅಧ್ಯಕ್ಷೆ ರಶೀದಾ ಬೇಗಾಂ, ಮುಖ್ಯಾಧಿಕಾರಿ ಗಂಗಾಧರ, ಪೊಲೀಸ್ ಇನ್‌ಸ್ಪೆಕ್ಟರ್ ಮಹಾದೇವಪ್ಪ ಇದ್ದರು.

ವಿರೋಧ: ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆ ವಿರೋಧಿಸಿ ಹಳೆಯ ಬಾಡಿಗೆದಾರರು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ರಜನಿಕಾಂತ ಮತ್ತಿತರ ಅಧಿಕಾರಿಗಳು ಧರಣಿನಿರತರ ಮನವೊಲಿಸಲು ಪ್ರಯತ್ನಿಸಿದರು.

‘ಸರ್ಕಾರದ ನಿಯಮಾನುಸಾರ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಇದರಿಂದ ಪುರಸಭೆಗೆ ಆದಾಯ ಹೆಚ್ಚಾಗಲಿದೆ. ಹರಾಜು ಪ್ರಕ್ರಿಯೆಗೆ ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.