ADVERTISEMENT

ಜಾಲಹಳ್ಳಿ: ಕೇಂದ್ರ ಜಲ ಶಕ್ತಿ ಇಲಾಖೆ ಅಧಿಕಾರಿ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:11 IST
Last Updated 22 ಮೇ 2025, 13:11 IST
ಜಾಲಹಳ್ಳಿ ಸಮೀಪದ ಎಚ್. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಯನ್ನು ಕೇಂದ್ರ ಜಲಶಕ್ತಿ ಇಲಾಖೆಯ ಅಧಿಕಾರಿ ಸತ್ಯ ಮೂರ್ತಿ ನೇತೃತ್ವದ ತನಿಖಾ ತಂಡ ಪರಿಶೀಲಿಸಿತು
ಜಾಲಹಳ್ಳಿ ಸಮೀಪದ ಎಚ್. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಯನ್ನು ಕೇಂದ್ರ ಜಲಶಕ್ತಿ ಇಲಾಖೆಯ ಅಧಿಕಾರಿ ಸತ್ಯ ಮೂರ್ತಿ ನೇತೃತ್ವದ ತನಿಖಾ ತಂಡ ಪರಿಶೀಲಿಸಿತು   

ಜಾಲಹಳ್ಳಿ: ಸಮೀಪದ ಚಿಂಚೋಡಿ, ಹೊಸೂರು ಸಿದ್ಧಾಪುರ, ಪಲಕನಮರಡಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿಗಳ‌ ಸ್ಥಳ ಪರಿಶೀಲನೆಗೆ ಗುರುವಾರ ಕೇಂದ್ರ ಜಲ ಶಕ್ತಿ ಇಲಾಖೆಯ ಅಧಿಕಾರಿ ಸತ್ಯಮೂರ್ತಿ ನೇತೃತ್ವದ ತಂಡ ಭೇಟಿ ನೀಡಿ‌ ಪರಿಶೀಲನೆ ಮಾಡಿದರು.

‌2023ರಿಂದ 2025ನೇ ಸಾಲಿನ ನರೇಗಾ ಯೋಜನೆಯಡಿ ಜಲ‌ ಸಿಂಚನ‌ ಜಲ ಭಾಗಿದಾರ ಹೆಸರಿನಲ್ಲಿ‌ ಅನುಷ್ಠಾನಗೊಂಡ ರೈತರ ಜಮೀನುಗಳಲ್ಲಿ ಕೃಷಿ ಹೊಂಡ, ಗುಡ್ಡಗಾಡು ಪ್ರದೇಶದಲ್ಲಿ ಕಂದಕ‌, ಕೃಷಿ ಜಮೀನುನಲ್ಲಿ ಬದು ನಿರ್ಮಾಣದಂತಹ ಕಾಮಗಾರಿಗಳ ಸ್ಥಳಕ್ಕೆ ಕೇಂದ್ರ ಜಲಶಕ್ತಿ ಇಲಾಖೆಯ ತಂಡ ಭೇಟಿ ನೀಡಿ‌‌ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣಾರಾವ ನಾಯಕ, ಪಿಡಿಒ ತಿಮ್ಮಣ್ಣ, ಚನ್ನಬಸವ, ನರೇಗಾ ತಾಂತ್ರಿಕ ಸಂಯೋಜಕ ಸಾಗರ್ ಉಪಸ್ಥಿತರಿದ್ದರು.

ADVERTISEMENT

ಆರೋಪ: ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳು ನಾರಾಯಣಪುರ ಬಲದಂಡೆ ಕಾಲುವೆ ಮೂಲಕ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದ್ದು, ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸುವಂತಹ ಅವಶ್ಯಕತೆ ಇಲ್ಲ. ಆದರೂ ಅಧಿಕಾರಿಗಳು ಹಾಗೂ ಕೆಲ ರೈತರು ಸೇರಿಕೊಂಡು ಕೃಷಿಹೊಂಡ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ರೈತರು ಆರೋಪಿಸಿದರು.

‘ಈ ಹಿಂದೆ ನರೇಗಾ ಯೋಜನೆಯಡಿ ಭಾರಿ ಪ್ರಮಾಣ ಭ್ರಷ್ಟಾಚಾರ ಮಾಡಿ ತಾಲ್ಲೂಕು ಪಂಚಾಯಿತಿ  ಹಾಗೂ ಎಡಿ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ. 33 ಜನ ಪಿಡಿಒ ಗಳನ್ನು ಸೇವೆಯಿಂದ ಅಮಾನತು  ಮಾಡಲಾಗಿತ್ತು. ಮರಳಿ ಅದೇ ಚಾಳಿ ಮುಂದುವರಿಸಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ದೇವದುರ್ಗ ತಾಲ್ಲೂಕಿನ ಗ್ರಾಮ  ಪಂಚಾಯಿತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ ನಾಯಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.