ರಾಯಚೂರು: ನಗರದ ಮಾವಿನಕೆರೆಯಲ್ಲಿ ಬುಧವಾರ ಮೊಸಳೆ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೊಸಳೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂದೀಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಕೆರೆಯ ದಡದಲ್ಲಿ ಬೆಳಿಗ್ಗೆ ಬೃಹದಾಕಾರದ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದರು. ಕೆರೆಯಲ್ಲಿ ತಾಡಪಲ್ ಬಿಸಾಡಿದ್ದು ಅದರ ಮೇಲೆ ಮೊಸಳೆ ಮಲಗಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಬಳಿಕ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆ ಮಾಹಿತಿ ನೀಡಿದ್ದರು.
ಸಾರ್ವಜನಿಕರ ಕರೆಗೆ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾವಿನಕೆರೆಗೆ ದೌಡಾಯಿಸಿ, ಮೊಸಳೆ ಹಿಡಿಯಲು ಜಾಲ ಬೀಸಿದರು. ಕಾರ್ಯಾಚರಣೆ ನಡೆಸಿ ಕೆಲವೇ ನಿಮಿಷಗಳಲ್ಲಿ ಮೊಸಳೆ ಹಿಡಿದರು.
ನಗರದ ಹೃದಯಭಾಗದಲ್ಲಿರುವ ಮಾವಿನಕೆರೆಯಲ್ಲಿ ಮೊಸಳೆ ಹೇಗೆ ಪ್ರತ್ಯಕ್ಷವಾಯಿತು ಎಂದು ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದ ಕೊನೆಗೆ ನಿಟ್ಟುಸಿರುಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.