ಶಕ್ತಿನಗರ: ವೈಟಿಪಿಎಸ್ ಚಾಲನೆ ಮತ್ತು ನಿರ್ವಹಣೆಯ ಟೆಂಡರ್ನ್ನು ಖಾಸಗಿಯ ಪವರ್ ಮೆಕ್ ಕಂಪನಿಗೆ ನೀಡಿರುವುದನ್ನು ರದ್ದುಪಡಿಸಬೇಕು. ಫೆ.7 ರೊಳಗೆ ಮಾಹಿತಿ ನೀಡದಿದ್ದರೆ, ತೀವ್ರ ಹೋರಾಟ ಮಾಡುವ ಕುರಿತು ವಿವಿಧ ಸಂಘದ ಪದಾಧಿಕಾರಿಗಳು ನಿರ್ಣಯ ತೆಗೆದುಕೊಂಡರು.
ಇಲ್ಲಿನ ಅತಿಥಿ ಗೃಹದಲ್ಲಿ ಗುರುವಾರ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಮಾನವ ಸಂಪನ್ಮೂಲ ನಿರ್ದೇಶಕ ದೊರೆಬಾಗೇಶ್ವರ ನಾಯಕ ಅಧ್ಯಕ್ಷತೆಯಲ್ಲಿ ವಿವಿಧ ಸಂಘದ ಪದಾಧಿಕಾರಿಗಳ ಮಧ್ಯೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
’ವಿದ್ಯುತ್ ಘಟಕಗಳ ನಿರ್ಮಾಣಕ್ಕಾಗಿ ಭೂಮಿ ಮತ್ತು ಮನೆ ಕಳೆದು ಕೊಂಡಿದ್ದೇವೆ. ಇತ್ತ ಜಮೀನು ಇಲ್ಲ. ಉದ್ಯೋಗ ಕೂಡ ನೀಡಿಲ್ಲ. ಕುಟುಂಬದ ಜೀವನೋಪಯಕ್ಕೆ ತೊಂದರೆ ಆಗುತ್ತಿದೆ. ಖಾಸಗಿಯ ಕಂಪನಿಗೆ ನೀಡಿರುವ ಟೆಂಡರ್ ಅನ್ನು ರದ್ದುಪಡಿಸಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು’ ಎಂದು ವಿವಿಧ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಆರ್ಟಿಪಿಎಸ್ ವಿವಿಧ ವಿಭಾಗದಲ್ಲಿ 20 ವರ್ಷಗಳಿಂದ ದುಡಿಯುವ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಖಾಯಂ ಗೊಳಿಸಬೇಕು. ಭೂಮಿ ಮತ್ತು ಕಳೆದುಕೊಂಡ ಸಂತ್ರಸ್ಥರಿಗೆ ಉದ್ಯೋಗ ನೀಡಬೇಕು. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ವಿವಿಧ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಸಮಸ್ಯೆಗಳನ್ನು ಆಲಿಸಿದ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಮಾನವ ಸಂಪನ್ಮೂಲ ನಿರ್ದೇಶಕ ದೊರೆಬಾಗೇಶ್ವರ ನಾಯಕ ಮಾತನಾಡಿ, ಭೂಮಿ ಮತ್ತು ಮನೆ ಕಳೆದು ಕೊಂಡ ಸಂತ್ರಸ್ತರಿಗೆ ಉದ್ಯೋಗ ನೀಡುವ ಕುರಿತು ಭರವಸೆ ನೀಡಿದರು.
ವೈಟಿಪಿಎಸ್ ನಿರ್ವಹಣೆಯ ಖಾಸಗಿ ಕಂಪನಿಗೆ ನೀಡಿರುವ ಟೆಂಡರ್ ರದ್ದುಪಡಿಸಿಲು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗುವುದು. ಫೆ.7 ರೊಳಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಎಂದರು.
ಸಭೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಸಿಇಓ ಅಯ್ಯಪ್ಪ, ವೈಟಿಪಿಎಸ್ ಮುಖ್ಯ ಎಂಜಿನಿಯರ್, ಪ್ರಭಾರಿ ಮುಖ್ಯ ಎಂಜಿನಿಯರ್ ಪ್ರಭುಸ್ವಾಮಿ, ಆರ್ಟಿಪಿಎಸ್ ಪ್ರಭಾರಿ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನಸ್ವಾಮಿ, ಮೋಯಿನುದ್ದೀನ್ ಖಾನ್, ಮಾನವ ಸಂಪನ್ಮೂಲ ವಿಭಾಗದ ಪ್ರಭಾರಿ ಉಪ ಪ್ರಬಂಧಕ ಶಶಿಧರ, ರಾಜು ವೈಟಿಪಿಎಸ್, ಭಾರತ ಕಮ್ಯೂನಿಸ್ಟ್ ಪಕ್ಷ ( ಮರ್ಕ್ಸ್ವಾದಿ ಲೆನಿನ್ವಾದಿ) ಜಿಲ್ಲಾ ಸಮಿತಿಯ ಅಧ್ಯಕ್ಷ ಅಮರೇಶ, ಆರ್ಟಿಪಿಎಸ್ ವಿವಿಧ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸರೆಡ್ಡಿ, ಸುರೇಶಗೌಡ ಮಾಲಿಪಾಟೀಲ, ಗುತ್ತೇದಾರರ ಸಂಘದ ಅಧ್ಯಕ್ಷ ಪ್ರಭುಲಿಂಗ ಸಜ್ಜನ್, ಚಿಕ್ಕಸೂಗೂರು ಭೂ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.