ಲಿಂಗಸುಗೂರು: ಮಸ್ಕಿ ಪಟ್ಟಣದ ಅಶೋಕ ಶಿಲಾಶಾಸನದ ಸುತ್ತಲಿನ ನಿಷೇಧಿತ ಪ್ರದೇಶದಲ್ಲಿ ಭೂ–ಪರಿವರ್ತನೆ ಹಾಗೂ ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
‘ಮಸ್ಕಿ ಪಟ್ಟಣದ ಅಶೋಕನ ಶಿಲಾಶಾಸನಗಳು, ಕಲ್ಲಿನ ಮೇಲೆ ಕೆತ್ತಲಾದ ಲಿಪಿಗಳು, ಚೋಳರ ಕಾಲದ ಲಿಪಿಗಳು, ಗುಹೆಗಳು, ಸುರಂಗ ಸೇರಿ ಐತಿಹಾಸಿಕ ಪುರಾತನ ಪಳೆಯುಳಿಕೆಗಳಿರುವ ಸರ್ವೆ ನಂಬರ್ಗಳಲ್ಲಿ ಭೂ–ಪರಿವರ್ತನೆ, ಗಣಿಗಾರಿಕೆ ಮತ್ತು ಕಟ್ಟಡ ನಿರ್ಮಾಣ ನಿಷೇಧಿಸಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆದೇಶ ಹೊರಡಿಸಿದೆ. ಆದರೂ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಜನ ವಸತಿಗೆ ಯೋಗ್ಯ ಇದೆ ಎಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಆದ ಕಾರಣ ಭೂ–ಪರಿವರ್ತನೆಗೆ ಅನುಮತಿ ನೀಡಲಾಗಿದೆ. ಐತಿಹಾಸಿಕ ಕುರುಹುಗಳಿರುವ ಕಲ್ಲುಗಳನ್ನು ಕಿತ್ತಿ ನಾಶ ಮಾಡಲಾಗಿದೆ. ಕೂಡಲೇ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಜಮದಗ್ನಿ ಗೋನಾಳ, ಮಲ್ಲಿಕ್ ಮುರಾರಿ, ಮರಿಸ್ವಾಮಿ ಮುದಬಾಳ ಮತ್ತು ಸುಭಾಷ ಕಡಬೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.