ಮುದಗಲ್: ಪಟ್ಟಣದ ಶ್ರೀಬಾಲಾಜಿ ಕೃಷಿ ಕೇಂದ್ರದಲ್ಲಿ ರಸಗೊಬ್ಬರ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರಿಂದ ರೈತರು ಸೋಮವಾರ ಅಂಗಡಿಗೆ ಮುತ್ತಿಗೆ ಹಾಕಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ವಿರೋಧಿಸಿದರು.
ಚೀಲ ಗೊಬ್ಬರಕ್ಕೆ ₹250 ಹೆಚ್ಚಿಗೆ ಪಡೆಯುತ್ತಿದ್ದಾರೆ. ಗೊಬ್ಬರ ಖರೀದಿಸಿದಕ್ಕೆ ರೈತರು ಜಿ.ಎಸ್.ಟಿ ರಸೀದಿ ಕೊಡು ಎಂದರೆ ಕೊಡುತ್ತಿಲ್ಲ. ಹೆಚ್ಚಿನ ದರ ಕೊಟ್ಟು ಗೊಬ್ಬರ ಕೊಂಡುಕೊಳ್ಳಲು ತೊಂದರೆಯಾಗುತ್ತಿದೆ. ನಿಗದಿತ ದರದಲ್ಲಿ ಗೊಬ್ಬರ ಮಾರಾಟ ಮಾಡಬೇಕು. ಗೊಬ್ಬರ ಖರೀದಿಸಿದ ರಸೀದಿ ನೀಡಬೇಕು ಎಂದು ಪಟ್ಟು ಹಿಡಿದರು. ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಿದರು.
ಸ್ಥಳಕ್ಕೆ ಆಗಮಿಸಿ ಕೃಷಿ ಅಧಿಕಾರಿ ಮಾಂತಯ್ಯ ಹಿರೇಮಠ ಪರಿಶೀಲಿಸಿದರು. ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದಾಗಿ ಅಂಗಡಿ ಮಾಲೀಕರು ಒಪ್ಪಿಕೊಂಡರು. ಅಂಗಡಿ ಪರವಾನಗಿ ರದ್ದು ಮಾಡಬೇಕು ಮತ್ತು ರಸೀದಿ ಕೊಡಿಸಬೇಕು ಎಂದು ರೈತರು ಪಟ್ಟು ಹಿಡಿದರು. ‘ಪರವಾನಗಿ ರದ್ದು ಮಾಡಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ’ ಎಂದು ಕೃಷಿ ಅಧಿಕಾರಿ ಹೇಳಿ ಹೋದರು.
ಅಂಗಡಿ ಮಾಲೀಕರ ವಿರುದ್ಧ ಕ್ರಮ ತಗೆದುಕೊಳ್ಳುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ರೈತರು ಅಂಗಡಿ ಮುಂದೆ ಕುಳಿತರು. ಕೃಷಿ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಮರಳಿ ಬಂದು ಅಂಗಡಿ ಮಾಲೀಕರ ಜತೆ ಚರ್ಚೆ ನಡೆಸಿದರು. ಸಂಜೆಯವರೆಗೂ ಪ್ರತಿಭಟನೆ ನಡೆದಿತ್ತು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ಜಹಗೀರ ನಂದಿಹಾಳ, ಸೋಮರಡ್ಡಿ, ಮಹಾಂತಗೌಡ, ಶಿವರಾಜ, ಮಲ್ಲಿಕಾರ್ಜುನ್, ಬಾಷಸಾಬ, ಮಬೂಸಾಬ, ದವಲಾಸಾಬ ಸೇರಿದಂತೆ ಇತ್ತರರು ಇದ್ದರು.
‘ಪರವಾನಗಿ ರದ್ದು ಭರವಸೆ’ ‘ಪ್ರತಿಭಟನೆ ನಡೆಸಿದ ರೈತರ ಜತೆ ಕೃಷಿ ಇಲಾಖೆ ಜೆಡಿ ಡಿಡಿ ಹಾಗೂ ಎಡಿ ಮಾತನಾಡಿದರು. ಅಂಗಡಿಯಲ್ಲಿದ್ದ ಡಿ.ಎ.ಪಿ ಗೊಬ್ಬರ ₹1350ಕ್ಕೆ ನೀಡಲಾಗಿದೆ. ಬುಧವಾರ ಸಹಾಯಕ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಗೊಬ್ಬರ ಅಂಗಡಿ ಪರವಾನಗಿ ರದ್ದು ಮಾಡುತ್ತೇವೆ ಎಂದು ಹೇಳಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೇವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರ ಗೌಡ ಜಹಗೀರ ನಂದಿಹಾಳ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.