ADVERTISEMENT

ಪ್ರವಾಹ: ಕೃಷ್ಣಾ ಏರಿಕೆ, ತುಂಗಭದ್ರಾ ಇಳಿಕೆ

ವಿವಿಧೆಡೆ ನದಿಪಾತ್ರದ ಜಮೀನುಗಳಲ್ಲಿ ಬೆಳೆಹಾನಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 15:26 IST
Last Updated 28 ಜುಲೈ 2021, 15:26 IST
ರಾಯಚೂರು ತಾಲ್ಲೂಕಿನ ದೇವದುರ್ಗದ ಹೂವಿನಹೆಡಗಿ ಗ್ರಾಮದ ಭತ್ತದ ಜಮೀನುಗಳಿಗೆ ಕೃಷ್ಣಾನದಿ ಪ್ರವಾಹ ನುಗ್ಗಿ ಬೆಳೆಹಾನಿಯಾಗಿದೆ
ರಾಯಚೂರು ತಾಲ್ಲೂಕಿನ ದೇವದುರ್ಗದ ಹೂವಿನಹೆಡಗಿ ಗ್ರಾಮದ ಭತ್ತದ ಜಮೀನುಗಳಿಗೆ ಕೃಷ್ಣಾನದಿ ಪ್ರವಾಹ ನುಗ್ಗಿ ಬೆಳೆಹಾನಿಯಾಗಿದೆ   

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಬುಧವಾರವೂ ಪ್ರವಾಹ ಮುಂದುವರಿದಿದ್ದು, ನಾಲ್ಕು ದಿನಗಳಿಂದ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ.

ಕೃಷ್ಣಾನದಿಯಲ್ಲಿ ಸ್ಥಿರವಾಗಿದ್ದ ಪ್ರವಾಹಮಟ್ಟ ಬುಧವಾರ 4 ಲಕ್ಷ ಕ್ಯುಸೆಕ್‌ ಅಡಿವರೆಗೂ ಏರಿಕೆಯಾಗಿದೆ. ದೇವದುರ್ಗ ಪಕ್ಕದ ಹೂವಿನಹೆಡಗಿ ಸೇತುವೆ ಪಕ್ಕದಲ್ಲಿದ್ದ ಹೋಟೆಲ್‌ಗಳಿಗೆ ನೀರು ನುಗ್ಗಿದೆ. ತುಂಗಭದ್ರಾ ನದಿಯಲ್ಲಿ ಪ್ರವಾಹಮಟ್ಟ ಇಳಿಮುಖವಾಗಿದ್ದು, 79 ಕ್ಯುಸೆಕ್‌ ಅಡಿ ನೀರು ಹರಿದು ಬರುತ್ತಿದೆ.

ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ, ಅಂಜಳ, ಜೋಳದಹೆಡಗಿ, ಗೂಗಲ್‌ ಗ್ರಾಮಗಳ ಕೃಷಿ ಜಮೀನುಗಳಿಗೆ ಪ್ರವಾಹ ನುಗ್ಗಿದ್ದರಿಂದ ಭತ್ತದ ಬೆಳೆಹಾನಿಯಾಗಿದೆ. ತಾಲ್ಲೂಕು ಕೃಷಿ ಅಧಿಕಾರಿಗಳು ಬೆಳೆಹಾನಿ ಪರಿಶೀಲನೆ ಆರಂಭಿಸಿದ್ದಾರೆ.

ADVERTISEMENT

ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕು ಕೇಂದ್ರಗಳಲ್ಲಿ ಎನ್‌ಡಿಆರ್‌ಎಫ್‌ ತಂಡಗಳು ಬೀಡುಬಿಟ್ಟಿವೆ. ಅಪಾಯದ ಮುನ್ಸೂಚನೆ ಅರಿತು ಕಾರ್ಯಾಚರಣೆ ಮಾಡುವುದಕ್ಕೆ ತೆರಳಲಿವೆ. ಅಲ್ಲದೆ, ಎಸ್‌ಡಿಆರ್‌ಎಫ್‌ ತಂಡದವರು ನದಿತೀರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

‘ಲಿಂಗಸುಗೂರು ಮತ್ತು ರಾಯಚೂರು ತಾಲ್ಲೂಕು ನಡುಗಡ್ಡೆಗಳಲ್ಲಿ ಮುಂಚಿತವಾಗಿಯೇ ಪಡಿತರ ವಿತರಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿದಿನ ಸ್ಥಿತಿಗತಿ ಬಗ್ಗೆ ವರದಿ ಪಡೆಯಲಾಗುತ್ತಿದೆ. ಸಮಸ್ಯೆ ಎದುರಾದರೆ ಪರಿಹರಿಸಲಾಗುವುದು. ಪ್ರವಾಹ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.