ರಾಯಚೂರು: 'ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಬರೀ ಪುಸ್ತಕಗಳನ್ನು ಓದಬೇಕು ಎನ್ನುವುದು ತಪ್ಪು ತಿಳಿವಳಿಕೆ. ಸುತ್ತಮುತ್ತಲಿನ ವಿಷಯಗಳನ್ನು ಗ್ರಹಿಸುವ ಸಾಮಾನ್ಯಜ್ಞಾನ ಇದ್ದರೂ ಯಶಸ್ಸು ಸಾಧ್ಯ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದರು.
‘ಕಾಲೇಜು ವಿದ್ಯಾಭ್ಯಾಸ ಸಮಯದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಗುರಿ ಇಟ್ಟುಕೊಂಡು ಓದಲಾರಂಭಿಸಬೇಕು. ಪ್ರತಿಯೊಂದು ಪುಸ್ತಕದಲ್ಲೂ ಗ್ರಹಿಸಲು ಅಗತ್ಯವಾದ ವಿಷಯ ಇದ್ದೇ ಇರುತ್ತದೆ. 7ನೇ ಇಯತೆಯಿಂದ 12 ರವರೆಗಿನ ಪಠ್ಯಪುಸ್ತಕಗಳನ್ನು ತೆಗೆದಿಟ್ಟುಕೊಳ್ಳಬೇಕು. ಪುನರ್ ಮನನ ಮಾಡಿಕೊಳ್ಳಬೇಕು’ ಎಂದರು.
‘ಕಲ್ಯಾಣ ಕರ್ನಾಟಕ ಭಾಗದವರಿಗೆ 371–ಜೆ ವರದಾನವಾಗಿದ್ದು, ವಿವಿಧ ಹುದ್ದೆಗಳಿಗೆ ಆಯ್ಕೆಯಾಗಬೇಕು ಎನ್ನುವ ಛಲ ಇಟ್ಟುಕೊಂಡು ಓದಬೇಕು. ಗರಿಷ್ಠ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮ ವಹಿಸಿದರೆ, ಯಾವುದಾದರೂ ಒಳ್ಳೆಯ ಹುದ್ದೆಗೆ ಆಯ್ಕೆಯಾಗುವುದು ಖಚಿತ. ಓದುವುದನ್ನು ಯಾವುದೇ ಕಾರಣಕ್ಕೂ ಸಿಮೀತ ಮಾಡಿಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದರು.
‘ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ಒದಗಿಸಲು ಸಮಾಜ ಕಲ್ಯಾಣ ಇಲಾಖೆಯು ಪ್ರತಿವರ್ಷ ಏಪ್ರಿಲ್ನಲ್ಲಿ ಅರ್ಜಿ ಆಹ್ವಾನಿಸುತ್ತದೆ. ಈ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು. ಪರೀಕ್ಷೆ ಕುರಿತು ಗೊಂದಲ ಇದ್ದರೆ ನನ್ನ ಕಚೇರಿಗೆ ಬಂದರೆ, ಪರೀಕ್ಷೆ ಬರೆಯಲು ಅಗತ್ಯ ಸಹಾಯ ಮಾಡಲಾಗುವುದು’ ಎಂದು ತಿಳಿಸಿದರು.
‘ಮೊಬೈಲ್ ಇಂಟರ್ನೆಟ್ ಸೌಲಭ್ಯವನ್ನು ಬರೀ ಹರಟೆ, ಹಾಸ್ಯಗಳಿಗೆ ಸಿಮೀತ ಮಾಡಿಕೊಳ್ಳಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿ ಓದಿಕೊಳ್ಳಬೇಕು. ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯು ಇಂಟರ್ನೆಟ್ನಲ್ಲಿ ಸಿಗುತ್ತದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.