ಕವಿತಾಳ: ‘ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ 17 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 5 ಎ ನಾಲೆ ನಿರ್ಮಾಣ ಮಾಡುವ ಕುರಿತು ಖಚಿತ ಭರವಸೆ ನೀಡದಿದ್ದರೆ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಪ್ರತಿನಿಧಿಸುವ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಬೇಕಾಗುತ್ತದೆ’ ಎಂದು 5ಎ ನಾಲೆ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪುರ ಹೇಳಿದರು.
ಅಮೀನಗಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ‘ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಇಚ್ಛಾಶಕ್ತಿಯ ಕೊತೆಯಿಂದ ಯೋಜನೆ ಜಾರಿ ಮಾಡುವಲ್ಲಿ ವಿಳಂಬವಾಗುತ್ತಿದೆ. ನಾಲೆ ನಿರ್ಮಣ ಮಾಡುವಂತೆ ಯೋಜನೆ ವ್ಯಾಪ್ತಿಯ ರೈತರು ಅನೇಕ ಬಾರಿ ಹೋರಾಟ, ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಉಪ ಚುನಾವಣೆಗೆ ಮುಂಚೆ ನಾಲೆ ನಿರ್ಮಾಣ ಮಾಡುವ ಕುರಿತು ರೈತರಿಗೆ ಖಚಿತ ಭರವಸೆ ನೀಡಬೇಕು ಮತ್ತು ಸರ್ಕಾರದ ಮಟ್ಟದಲ್ಲಿ ಯೋಜನೆ ಜಾರಿಗೆ ಚಾಲನೆ ನೀಡಬೇಕು’ ಎಂದು ಒತ್ತಾಯಿಸಿದರು.
ವಟಗಲ್ ಗ್ರಾಮದಿಂದ ಬೈಕ್ ರ್ಯಾಲಿ ಮೂಲಕ ಕೊಟೇಕಲ್, ಆನಂದಗಲ್, ಕಾಚಾಫುರ, ಯತಗಲ್ , ನೆಲಕೊಳ ಮತ್ತಿತರ ಗ್ರಾಮಗಳಿಗೆ ತೆರಳಿದ ರೈತ ಮುಖಂಡರು ಅಲ್ಲಲ್ಲಿ ಸಭೆ ನಡೆಸಿ ರೈತರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಆದನಗೌಡ, ಭರತರಾಜ, ಶಿವನಗೌಡ ನಾಡಗೌಡ, ಬಸವರಾಜ ಬುಂಕಲದೊಡ್ಡಿ, ನಾಗಪ್ಪ ಕಡಬೂರು, ಶ್ರೀನಿವಾಸ ಇರಕಲ್, ಮಾನಪ್ಪ ಚಿಲ್ಕರಾಗಿ, ಗಂಗಪ್ಪ, ಹುಚ್ಚಪ್ಪ ಅಮೀನಗಡ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.