ರಾಯಚೂರು: ರಾಜ್ಯ ಸರ್ಕಾರ ಹಿಂದಿ ದಿವಸ್ ಬಲವಂತಾಗಿ ಹೇರುವುದನ್ನು ವಿರೋಧಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹಿಂದಿನಿಂದಲೂ ಭಾರತ ಒಕ್ಕೂಟ ಸರ್ಕಾರ ಕುತಂತ್ರದಿಂದ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ಸೃಷ್ಟಿಸಿ ದೇಶದ ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡಲಾಗುತ್ತಿದೆ. ಕೇವಲ 400 ವರ್ಷವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಸರ್ಕಾರಕ್ಕೆ 2500 ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆ.
ಕನ್ನಡ ಭಾಷೆ ಕೊಂಕಣಿ, ತುಳು, ಕೊಡವ ಸೇರಿ ಹತ್ತಾರು ಭಾಷೆಗಳ ತವರೂರು. ವೈವಿದ್ಯಮಯ ಸಂಸ್ಕೃತಿ ಹೊಂದಿರುವ ರಾಜ್ಯವೇ ಒಂದು ಅದ್ಭುತ ಪ್ರಪಂಚ. ಕನ್ನಡಿಗರಿಗೆ ಸಂಬಂಧವೇ ಇಲ್ಲದ ಹಿಂದಿ ಭಾಷೆ ಆಚರಣೆ ಮಾಡುವುದು ಸ್ವಾಭಿಮಾನಕ್ಕೆ ಧಕ್ಕೆ ತರುವ ಹಾಗೂ ಘೋರ ಅನ್ಯಾಯವಾಗಿದೆ. ಹಿಂದಿ ದಿವಸ್ ಹಿಂದಿ ಭಾಷಿಕರ ರಾಜ್ಯಗಳಿಗೆ ಸೀಮಿತವಾಗಿರಲಿ, ಕರ್ನಾಟಕ್ಕೆ ಅವಶ್ಯಕತೆಯಿಲ್ಲ. ಬಲವಂತವಾಗಿ ಹೇರಿದರೆ ಕನ್ನಡಿಗರು ಆಚರಣೆಯಲ್ಲಿ ಭಾಗವಹಿಸುವುದಿಲ್ಲ. ರಾಜ್ಯ ಸರ್ಕಾರಕ್ಕೆ ಕನ್ನಡ ಭಾಷೆಯ ಮೇಲೆ ಪ್ರೀತಿ, ಗೌರವ ವಿದ್ದರೆ ಕೂಡಲೇ ಹಿಂದಿ ದಿವಸ್ ಆಚರಣೆ ಹಿಂಪಡೆಯಲಿ ಎಂದು ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವಿರೂಪಾಕ್ಷಿ, ರಾಜ್ಯ ಘಟಕದ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎನ್.ಶಿವಶಂಕರ, ಮುಖಂಡರಾದ ಯೂಸುಫಖಾನ್, ಅಕ್ಬರ್ ಹುಸೇನ್, ಪವನಕುಮಾರ್, ರಾಮಕೃಷ್ಣ, ನರಸಿಂಹ, ಅಮರೇಶ ಪಾಟೀಲ ಆಮ್ಜದ್ ಹುಸೇನ್, ನರಸಪ್ಪ ಆಶಾಪೂರ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.