ಹಟ್ಟಿಚಿನ್ನದಗಣಿ: ಪಟ್ಟಣದ ನಿವಾಸಿ ಸೂಲಗಿತ್ತಿ ಕಮಲಮ್ಮ ಅವರಿಗೆ ಈ ಬಾರಿ ಜಾನಪದ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
ಕಮಲಮ್ಮ ಅವರು 500 ಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ. ತಾಯಿಗೆ ಹೆರಿಗೆ ಮಾಡಿಸಲು ಸಹಾಯ ಮಾಡುತ್ತ, ಸೂಲಗಿತ್ತಿ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕಮಲಮ್ಮ ಅವರಿಗೆ ಓದು ಬರಹ ಗೊತ್ತಿಲ್ಲ. ಆದರೆ ಇವರು ಬಹುಮುಖ ಜಾನಪದ ಪ್ರತಿಭಾವಂತರು.
ಸೋಬಾನೆ, ಜೋಗುಳ, ಬುರ್ರಾ ಕಥಾ, ಜಾನಪದ ಹಾಡುತ್ತಾರೆ. ಕಮಲಮ್ಮ ಅವರಲ್ಲಿ ಜಾನಪದ ಜ್ಞಾನದ ಭಂಡಾರವೇ ಇದೆ. ಅಲೆಮಾರಿ ಸಮುದಾಯದ ಇವರು ಗಿಡಮೂಲಿಕೆ ನೀಡುವಲ್ಲಿಯೂ ಪರಿಣಿತಿ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಎಲೆಮರೆ ಕಾಯಿಯಂತೆ ಜನಪದ ಕಲೆಯನ್ನು ಬೆಳಸುತ್ತ ಬಂದಿದ್ದಾರೆ. 59 ವರ್ಷದ ಕಮಲಮ್ಮ, ಅವರಿಗೆ 9 ಜನ ಮಕ್ಕಳು 14 ಜನ ಮೊಮ್ಮಕ್ಕಳು ಇದ್ದಾರೆ. ಕೂಲಿ ಮಾಡುತ್ತ, ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದುವರೆಗೂ ಅವರಿಗೆ ವಸತಿ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಒಂದು ಮನೆ ನೀಡಿಲ್ಲ. ‘ಜಾನಪದ ಹಾಡುಗಳನ್ನು ಪುಸ್ತಕ ರೂಪಕ್ಕೆ ತರಬೇಕು ಎನ್ನುವುದು ನನ್ನ ಆಶಯ. ಪುಸ್ತಕ ಮಾಡಲು ನನ್ನ ಬಳಿ ಅಷ್ಟು ಹಣವಿಲ್ಲ. ಯಾರದಾರೂ ಮುಂದೆ ಬಂದು ನಾನು ಹಾಡುವ ಜಾನಪದ ಹಾಡುಗಳನ್ನು ಪುಸ್ತಕ ರೂಪಕ್ಕೆ ತರಬೇಕು. ಅದಕ್ಕೆ ಸರ್ಕಾರ ಮುಂದಾಗಬೇಕು. ಈ ಮೂಲಕ ಜಾನಪದ ಸಾಹಿತ್ಯವನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಕಮಲಮ್ಮ ಅವರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.