ADVERTISEMENT

ಮಸ್ಕಿ | ಮಲ್ಲಿಕಾರ್ಜುನ ಬೆಟ್ಟದ ದೇವಸ್ಥಾನ ರಸ್ತೆ ಒತ್ತುವರಿ ಯತ್ನ: ಆರೋಪ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 14:14 IST
Last Updated 26 ಆಗಸ್ಟ್ 2023, 14:14 IST
ಮಸ್ಕಿಯ ಮಲ್ಲಿಕಾರ್ಜುನ ಬೆಟ್ಟಕ್ಕೆ ತೆರಳುವ ರಸ್ತೆಯ ಎರಡು ಕಡೆ ಕಲ್ಲು ಮಣ್ಣು ಹಾಕಿ ಒತ್ತುವರಿ ಮಾಡಿರುವುದು
ಮಸ್ಕಿಯ ಮಲ್ಲಿಕಾರ್ಜುನ ಬೆಟ್ಟಕ್ಕೆ ತೆರಳುವ ರಸ್ತೆಯ ಎರಡು ಕಡೆ ಕಲ್ಲು ಮಣ್ಣು ಹಾಕಿ ಒತ್ತುವರಿ ಮಾಡಿರುವುದು   

ಮಸ್ಕಿ: ‘ಪಟ್ಟಣದ ಪ್ರಸಿದ್ಧ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳುವ ರಸ್ತೆ ಎರಡೂ ಬದಿಗಳಲ್ಲಿ ಒತ್ತುವರಿ ಮಾಡಿ ಡಬ್ಬಾ ಅಂಗಡಿ ಹಾಗೂ ಗುಡಿಸಲು ಹಾಕಲು ಯತ್ನಿಸಲಾಗುತ್ತಿದೆ. ಒತ್ತುವರಿ ತಡೆಯುವಲ್ಲಿ ಕಂದಾಯ ಹಾಗೂ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಸರ್ವೇ ನಂ 400ರಲ್ಲಿ ಬೆಟ್ಟಕ್ಕೆ ತೆರಳುವ ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ತಿಪ್ಪೆಗಳ ರಾಶಿ, ಕಲ್ಲು ಮಣ್ಣು ಹಾಕಿದ್ದರಿಂದ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ಒತ್ತುವರಿ ತಡೆಯುವಂತೆ ಹಲವು ಬಾರಿ ಕಂದಾಯ ಇಲಾಖೆ ಹಾಗೂ ಪುರಸಭೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೇವಸ್ಥಾನ ಸಮಿತಿ ಮುಖಂಡ ಅಮರೇಶ ಬ್ಯಾಳಿ ಅಸಮಾಧಾನ ವ್ಯಕ್ತಪಡಿದ್ದಾರೆ.

‘ಶ್ರಾವಣಮಾಸದಲ್ಲಿ ಒಂದು ತಿಂಗಳು ಭಕ್ತರು ವಾಹನಗಳ ಮೇಲೆ ಮಲ್ಲಿಕಾರ್ಜುನನ ದರ್ಶನಕ್ಕೆ ಬೆಟ್ಟ ಹತ್ತುವುದು ವಾಡಿಕೆ. ನಿತ್ಯ ನೂರಾರು ವಾಹನಗಳು ಬೆಟ್ಟಕ್ಕೆ ತೆರಳುತ್ತಿದ್ದರಿಂದ ರಸ್ತೆಯ ಮೇಲೆ ಹಾಕಿರುವ ತಿಪ್ಪೆ, ಮಣ್ಣು, ಕಲ್ಲುಗಳಿಂದ ವಾಹನ ಸವಾರರು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಅಯ್ಯಪ್ಪ ಸ್ವಾಮಿ ಹಾಗೂ ಮಲ್ಲಿಕಾರ್ಜುನ ದೇವಸ್ಥಾನ ಇದ್ದುದ್ದರಿಂದ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ದೇವಸ್ಥಾನಗಳಿಗೆ ತೆರಳುವ ರಸ್ತೆಯ ಒತ್ತುವರಿ ತಡೆಯುವ ಜೊತೆಗೆ ರಸ್ತೆ ಮೇಲೆ ಹಾಕಿರುವ ಮಣ್ಣು, ಕಲ್ಲು, ಕಟ್ಟಿಗೆಗಳನ್ನು ತೆರವುಗೊಳಿಸಿ ಭಕ್ತರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.