ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಬುಧವಾರ ಭೇಟಿ ನೀಡಿದ ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಅವರು ವಿದ್ಯಾರ್ಥಿನಿಯರೊಂದಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿದರು.
ಆಹಾರದ ಗುಣಮಟ್ಟ ಹಾಗೂ ಶುಚಿ–ರುಚಿಯ ಬಗ್ಗೆ ವಿದ್ಯಾರ್ಥಿನಿಯರಿಂದ ಕೇಳಿ ತಿಳಿದುಕೊಂಡರು.
ವಿದ್ಯಾರ್ಥಿನಿಯರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳುವಂತೆ ಶಾಲೆಯ ಉಪ ಪ್ರಾಂಶುಪಾಲ ಸುಧಾಕರ ಸಂಜೀವ್ ಅವರಿಗೆ ಸೂಚಿಸಿದರು.
ನಂತರ ಶಾಲೆ ಆವರಣದಲ್ಲಿನ ಬಿಸಿಯೂಟ ತಯಾರಿಸುವ ಅಡುಗೆ ಕೋಣೆಗೆ ಭೇಟಿ ನೀಡಿ ಅಡುಗೆ ತಯಾರಿ ಕೋಣೆಯಲ್ಲಿನ ಸ್ವಚ್ಚತೆ ಹಾಗೂ ಅಡುಗೆ ತಯಾರಿಗೆ ಬಳಸಲಾಗುತ್ತಿರುವ ಆಹಾರ ಪಧಾರ್ಥಗಳು, ತರಕಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು.
ಅಡುಗೆ ಸಿಬ್ಬಂದಿಯೊಂದಿಗೆ ಮಾತನಾಡಿ,‘ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಆಹಾರ ತಯಾರಿಸುವಾಗ ಅಗತ್ಯ ಮುಂಜಾಗ್ರತೆ ವಹಿಸಬೇಕು. ಆಹಾರ ತಯಾರಿಕೆಗೆ ಬಳಸುವ ಆಹಾರ ಸಾಮಗ್ರಿಗಳನ್ನು ಸ್ವಚ್ಛವಾದ ಸ್ಥಳದಲ್ಲಿ ಸಂಗ್ರಹಿಸಬೇಕು. ಶುದ್ದ ಕುಡಿಯುವ ನೀರು ಬಳಸಬೇಕು’ ಎಂದು ಸೂಚನೆ ನೀಡಿದರು.
ಶಾಲೆಯ ಶಿಕ್ಷಕರಾದ ರೇಖಾದೇವಿ ಯಾಳಗಿ, ಬಂಡೆಮ್ಮ, ಮಂಜುಳಾ ಹಿರೇಮಠ, ರಜನಿ, ಶೇಖ್ ಹುಸೇನ್, ಚನ್ನಬಸವರಾಜ, ಪ್ರಮೋದ ಕುಮಾರ, ಶ್ರೀಮತಿ ಕಟ್ಟಿ, ನುಜಹತ್ ಫಾತಿಮಾ, ಅನ್ವರ್ ಹುಸೇನ್, ಶರಣಮ್ಮ, ಜಯಭೀಮ ಭಾವಿಕಟ್ಟಿ, ಶರತ್ ಕುಮಾರ್, ರಾಜಶೇಖರ. ಎಚ್. ರೇಣುಕಾ ಹಾಗೂ ಅಡುಗೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.