ರಾಯಚೂರು: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆಗೆ ಕಳೆದ ಏಳು ವರ್ಷಗಳಿಂದ ಜಿಲ್ಲೆಗಳ ಸಾಲಿನಲ್ಲಿ 30ರ ಒಳಗಡೆಯೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶ ಗಡಿಯಲ್ಲಿರುವ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಿಗಿಂತಲೂ ರಾಯಚೂರು ಜಿಲ್ಲೆ ಕಳಪೆ ಸಾಧನೆ ಮಾಡಿದೆ.
ಬಾಲಕಿಯರು ಬಾಲಕರಿಗಿಂತ ಉತ್ತಮ ಅಂಕಗಳನ್ನು ಪಡೆದಿದ್ದರೂ ಒಟ್ಟಾರೆ ಫಲಿತಾಂಶ ಶೇಕಡ 50 ಆಸುಪಾಸಿನಲ್ಲಿದೆ. ಒಟ್ಟಾರೆ ಫಲಿತಾಂಶ ತೃಪ್ತಿದಾಯಕವಿಲ್ಲ. ಇದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳಿಗೂ ತಲೆನೋವು ಉಂಟು ಮಾಡಿದೆ.
ಜಿಲ್ಲೆಯ 13,819 ಬಾಲಕರು ಹಾಗೂ 14,731 ಬಾಲಕಿಯರು ಸೇರಿ ಒಟ್ಟು 28,550 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5,922 ಬಾಲಕರು ಹಾಗೂ 8,939 ಬಾಲಕಿಯರು ಪಾಸಾಗಿದ್ದಾರೆ. ಬಾಲಕರು ಶೇಕಡ 42.85ರಷ್ಟು ಹಾಗೂ ಬಾಲಕಿಯರು 60.68 ರಷ್ಟು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ಅರ್ಧದಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಪರಿಶಿಷ್ಟ ಜಾತಿಯ 6,854 ವಿದ್ಯಾರ್ಥಿಗಳ ಪೈಕಿ 3,200 ಅಂದರೆ ಶೇಕಡ 52.48, ಪರಿಶಿಷ್ಟ ಪಂಗಡದ 5,636 ವಿದ್ಯಾರ್ಥಿಗಳ ಪೈಕಿ 2,509 (ಶೇ 52.98) ಹಾಗೂ ಇತರೆ ವರ್ಗದ 16,789 ವಿದ್ಯಾರ್ಥಿಗಳ ಪೈಕಿ 9,151 ಅಂದರೆ ಶೇ 64.03ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವರ್ಗಗಳಲ್ಲೂ ಬಾಲಕಿಯರೇ ಅಧಿಕ ಸಂಖ್ಯೆಯಲ್ಲಿ ಪಾಸಾಗಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿದ್ದ ಸರ್ಕಾರಿ ಶಾಲೆಗಳ 9,454 ಬಾಲಕರ ಪೈಕಿ ಕೇವಲ 3,657 ಹಾಗೂ 10,765 ಬಾಲಕಿಯರ ಪೈಕಿ 5,937 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅನುದಾನಿತ ಶಾಲೆಗಳ 906 ಬಾಲಕರ ಪೈಕಿ ಕೇವಲ 334 ಹಾಗೂ 1,394 ಬಾಲಕಿಯರ ಪೈಕಿ 1,192 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಅನುದಾನ ರಹಿತ ಶಾಲೆಗಳ 3,822 ಬಾಲಕರ ಪೈಕಿ ಕೇವಲ 1,931 ಹಾಗೂ 2,938 ಬಾಲಕಿಯರ ಪೈಕಿ 2,144 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
‘ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರೇ ಇರುತ್ತಾರೆಂದು ನಂಬಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ದಾಖಲು ಮಾಡಿದ್ದೆ. ಇಲ್ಲಿ ಕನ್ನಡವನ್ನೂ ಹಿಂದಿ, ತೆಲುಗಿನಲ್ಲಿ ಬರೆದು ಪಾಠ ಮಾಡುತ್ತಾರೆ. ಹೀಗಾಗಿ ನನ್ನ ಮಗ ಕನ್ನಡ ಹಾಗೂ ಇಂಗ್ಲಿಷ್ನಲ್ಲೂ ಫೇಲಾಗಿದ್ದಾನೆ’ ಎಂದು ಹೆಸರು ಹೇಳಿಕೊಳ್ಳಲು ಇಚ್ಚಿಸಿದ ಪಾಲಕರೊಬ್ಬರು ಬೇಸರ ವ್ಯಕ್ತಪಡಿಸಿದರು.
‘ನೆರೆಯ ತೆಲಂಗಾಣದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕನ್ನಡಿಗರಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಗಡಿಯಲ್ಲಿರುವ ತಾಯ್ನಾಡಿನ ಪ್ರೌಢ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿಲ್ಲ. ಪ್ರಸ್ತಕ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ಬೇಸರ ತಂದಿದೆ’ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಗತರಾಜ್ ನಿಜಾಮಕಾರಿ ತಿಳಿಸಿದರು.
‘371(ಜೆ) ಅಡಿ ಶೈಕ್ಷಣಿಕ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯ ಸಂಗತಿ. ಕಲ್ಯಾಣ ನಾಡಿನಲ್ಲಿ ಶಿಕ್ಷಕರ ಪ್ರತಿಭಾವಂತ ಶಿಕ್ಷಕರ ಕೊರತೆ ಇದೆ. ಹೊರ ಜಿಲ್ಲೆಗಳ ಶಿಕ್ಷಕರು ಇದ್ದರೆ ಜ್ಞಾನದ ವಿನಿಮಯವಾಗುತ್ತಿತ್ತು. ಅದಕ್ಕೆ ಕಡಿವಾಣ ಬಿದ್ದಿದ್ದು, ಇದು ಶಿಕ್ಷಣ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.
ಪರೀಕ್ಷೆಗೆ ಹಾಜರಾದವರ ವಿವರ ತಾಲ್ಲೂಕು;ಬಾಲಕರು;ಬಾಲಕಿಯರು ದೇವದುರ್ಗ;2070;2123 ಲಿಂಗಸುಗೂರು;3056;3103 ಮಾನ್ವಿ;2645;2860 ರಾಯಚೂರು;3795;4083 ಸಿಂಧನೂರು;2616;2928 ಉತ್ತೀರ್ಣರಾದವರು ತಾಲ್ಲೂಕು;ಬಾಲಕರು;ಬಾಲಕಿಯರು ದೇವದುರ್ಗ;879;1317 ಲಿಂಗಸುಗೂರು;1268;1711 ಮಾನ್ವಿ;1011;1573 ರಾಯಚೂರು;1299;2231 ಸಿಂಧನೂರು;1465;2107 ಉತ್ತೀರ್ಣರಾದವರು ಶೇಕಡಾವಾರು ತಾಲ್ಲೂಕು;ಬಾಲಕರು;ಬಾಲಕಿಯರು ದೇವದುರ್ಗ;42.46;62.03 ಲಿಂಗಸುಗೂರು;41.49;55.14 ಮಾನ್ವಿ;38.22;55 ರಾಯಚೂರು;34.23;54.64 ಸಿಂಧನೂರು;56;71.96 ಶಾಲೆಗಳ ಶೇಕಡಾವಾರು ಫಲಿತಾಂಶ ಸರ್ಕಾರಿ ಶಾಲೆ;47.45 ಅನುದಾನಿತ ಶಾಲೆ;51.83 ಅನುದಾನ ರಹಿತ ಶಾಲೆ;60.28
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.