ರಾಯಚೂರು: ಸಂಪನ್ಮೂಲಗಳ ಅವೈಜ್ಞಾನಿಕ ಸ್ವೆಚ್ಛಾಚಾರ ಬಳಕೆಯಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್ ಹೇಳಿದರು.
ನಗರದ ಪಂ.ಜಂಬಲದಿನ್ನಿ ರಂಗ ಮಂದಿರದಲ್ಲಿ ಶಿಕ್ಷಣ ಕಿರಣ ಸಂಸ್ಥೆ ರಾಯಚೂರು, ವಿ.ಜೆ.ಕ್ರೀಯೆಷನ್ಸ್ ರಾಯಚೂರು, ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶನಿವಾರ ಏರ್ಪಡಿಸಿದ್ದ ಪರಿಸರ ಜಾಗೃತಿ ಕುರಿತ ‘ನಾನು ನನ್ನ ಪರಿಸರ’ ಎಂಬ 25 ನಿಮಿಷದ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಾಣಿಗಳು ಹೊಟ್ಟೆ ತುಂಬುವವರೆಗೂ ಮಾತ್ರ ತಿನ್ನುತ್ತವೆ. ಆದರೆ, ಮನುಷ್ಯ ತನ್ನ ದುರಾಸೆ ಈಡೇರಿಸಿಕೊಳ್ಳಲು ನೈಸರ್ಗಿಕ ಸಂಪನ್ಮೂಲಗಳನ್ನು ಮಿತಿಮಿರಿ ಬಳಸಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಪರಿಸರ ಅಸಮತೋಲನ ಉಂಟಾಗುತ್ತಿದೆ ಎಂದರು.
ಶೀಘ್ರವೇ ಈ ‘ನಾನು ನನ್ನ ಪರಿಸರ’ ಎಂಬ ಸಾಕ್ಷ್ಯ ಚಿತ್ರವನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ತಾಲ್ಲೂಕು ಮತ್ತು ಪ್ರತಿ ಗ್ರಾಮಕ್ಕೂ ತಲುಪಿಸಿ ಪ್ರದರ್ಶಿಸುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಕೆ ನಂದನೂರ ಮಾತನಾಡಿ, ಪರಿಸರದಲ್ಲಿ ಅಸಮತೋಲನದಿಂದ ಅತಿವೃಷ್ಟಿ–ಅನಾವೃಷ್ಟಿ ಸಂಭವಿಸುತ್ತಿವೆ. ಪರಿಸರ ಜಾಗೃತಿಕ್ಕಿಂತ, ಮಾನವ ಜಾಗೃತನಾಗಬೇಕಿದೆ. ಪ್ರತಿನಿತ್ಯ ಉಪಯೋಗಿಸಿ ಎಸೆಯುವ ಚಹಾ ಕಪ್, ನೀರಿ ಬಾಟಲ್ಗಳು ಮರು ಬಳಕೆಯಾಗಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಜಯಣ್ಣ ಮಾತನಾಡಿ, ಪಠ್ಯಕ್ರಮದಲ್ಲಿ ಜಾಗತಿಕ ತಾಪಮಾನದ ಅನಾಹುತಗಳ ಬಗ್ಗೆ ಪಾಠಗಳನ್ನು ಸೇರಿಸಬೇಕಿದೆ ಎಂದರು.
ಭಾರತ ಜ್ಞಾನವಿಜ್ಞಾನ ಸಮಿತಿಯ ಸೈಯದ್ ಹಫಿಜುಲ್ಲಾ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಕ್ಷ್ಯಚಿತ್ರ ನಿರ್ದೇಶಕ ಹಾಗೂ ವರದಿಗಾರ ವಿಜಯ ಜಾಗಟಕಲ್, ಅಮರೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.