ADVERTISEMENT

ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ: ಶಾಸಕ.ಡಾ.ಶಿವರಾಜ ಪಾಟೀಲ

ಸ್ವಚ್ಛ ಭಾರತ ಮಿಷನ್‌ (ನಗರ) ವಿಶೇಷ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 14:03 IST
Last Updated 25 ಜನವರಿ 2019, 14:03 IST
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಚ್ಛ ಭಾರತ ಮಿಷನ್‌ (ನಗರ) ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ.ಡಾ.ಶಿವರಾಜ ಪಾಟೀಲ ಮಾತನಾಡಿದರು
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಚ್ಛ ಭಾರತ ಮಿಷನ್‌ (ನಗರ) ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ.ಡಾ.ಶಿವರಾಜ ಪಾಟೀಲ ಮಾತನಾಡಿದರು   

ರಾಯಚೂರು: ಸ್ವಚ್ಛ ಭಾರತ ಅಭಿಯಾನ ಯಶಸ್ಸಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದ್ದು, ಸ್ವಯಂ ಪ್ರೇರಿತವಾಗಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಡಾ.ಎಸ್.ಶಿವರಾಜ ಪಾಟೀಲ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ವಿಜಯಪುರ ಮತ್ತು ಧಾರವಾಡ, ಜಿಲ್ಲಾಡಳಿತ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತ ಸೇವಾ ದಳ, ಶಿಶು ಅಭಿವೃದ್ದಿ ಯೋಜನೆ ಹಾಗೂ ಗ್ರೀನ್ ರಾಯಚೂರು ಸಂಸ್ಥೆಯಿಂದ ಶುಕ್ರವಾರ ಆಯೋಜಿಸಿದ್ದ ಸ್ವಚ್ಛ ಭಾರತ ಮಿಷನ್ (ನಗರ) ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನೆಯ ಸುತ್ತಮುತ್ತ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಉತ್ತಮ ಆರೋಗ್ಯ ಹೊಂದಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಂದಲೇ ಸ್ವಚ್ಛತಾ ಕಾರ್ಯ ಆರಂಭವಾಗಬೇಕು ಎಂದು ತಿಳಿಸಿದರು.

ADVERTISEMENT

ಆರೋಗ್ಯದ ಹಿತ ದೃಷ್ಟಿಯಿಂದ 2014 ಅಕ್ಟೋಬರ್ 02 ರಂದು ಕೇಂದ್ರ ಸರ್ಕಾರ ಸ್ವಚ್ಚ ಭಾರತ ಮಿಷನ್ ಅಭಿಯಾನಕ್ಕೆ ಚಾಲನೆ ನೀಡಿದೆ ಎಂದರು.

ಕ್ಷೇತ್ರ ಪ್ರಚಾರ ಅಧಿಕಾರಿ ಜೆ.ತುಕಾರಾಮಗೌಡ ಪ್ರಾಸ್ತಾವಿಕ ಮಾತನಾಡಿ, ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ಪ್ರಚಾರ ಮಾಡುವ ಉದ್ದೇಶದಿಂದ ದೇಶದ್ಯಾಂತ ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಹೇಳಿದರು.

ಗ್ರೀನ್ ರಾಯಚೂರು ಸಂಸ್ಥೆ ಅಧ್ಯಕ್ಷೆ ಕಿಲಕಿಲೆ ಸರಸ್ವತಿ ಮಾತನಾಡಿ, ಜಪಾನ ದೇಶದಲ್ಲಿ ಶೇ. 60ರಷ್ಟು ಭೂ ಪ್ರದೇಶ ಹಸಿರುಮಯವಾಗಿದೆ. ನಮ್ಮ ದೇಶದಲ್ಲಿ ಕೇವಲ ಶೇ. 23ರಷ್ಟು ಭೂ ಪ್ರದೇಶ ಮಾತ್ರ ಹಸಿರಿನಿಂದ ಕೂಡಿದೆ. ಜಿಲ್ಲೆಯಲ್ಲಿ ಶೇ. 1ರಷ್ಟು ಹಸಿರು ಪ್ರದೇಶವಿದೆ. ಆದ್ದರಿಂದ ಮನೆಗಳ ಮುಂದೆ ಗಿಡಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞೆ ಬೋಧಿಸಲಾಯಿತು.ಪೌರಯುಕ್ತ ರಮೇಶ ನಾಯಕ, ನಗರಸಭೆ ಸದಸ್ಯ ಶರಣಬಸಪ್ಪ ಪಾಟೀಲ ಬಲ್ಲಟಗಿ, ನಾಗರಾಜ, ಪ್ರಭಾರಿ ಪ್ರಾಚಾರ್ಯ ದಸ್ತಗಿರಸಾಬ್ ದಿನ್ನಿ, ಜೆ.ಎಲ್.ಈರಣ್ಣ, ಗೌಡಪ್ಪ ಪಾಟೀಲ, ಮಲ್ಲನಗೌಡ, ಮಹಾದೇವಪ್ಪ, ಮುಖಂಡರಾದ ರವಿಂದ್ರ ಜಲ್ದಾರ್, ಮಹೇಂದ್ರ, ತಿಮ್ಮಾರೆಡ್ಡಿ, ರಾಜೇಂದ್ರ ಕುಮಾರ, ವಿದ್ಯಾಸಾಗರ ಚಿಣಮಗೇರಿ, ಗಂಗಮ್ಮ ಇದ್ದರು.

ಇದಕ್ಕೂ ಮುನ್ನ ನಡೆದ ಸ್ವಚ್ಛ ಭಾರತ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಬಿ.ಶರತ್‌ ಚಾಲನೆ ನೀಡಿದರು. ಉಪವಿಭಾಧಿಕಾರಿ ಶಿಲ್ಪಾಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.