ADVERTISEMENT

ಜಿಲ್ಲಾಮಟ್ಟದ ಉದ್ಯೋಗ ಮೇಳ: ನೋಂದಣಿ ಆರಂಭ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 13:45 IST
Last Updated 9 ಮಾರ್ಚ್ 2020, 13:45 IST
ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌ ಜಿಲ್ಲಾಮಟ್ಟದ ಉದ್ಯೋಗ ಮೇಳದ ಕರಪತ್ರವನ್ನು ಸೋಮವಾರ ಬಿಡುಗಡೆ ಮಾಡಿದರು
ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌ ಜಿಲ್ಲಾಮಟ್ಟದ ಉದ್ಯೋಗ ಮೇಳದ ಕರಪತ್ರವನ್ನು ಸೋಮವಾರ ಬಿಡುಗಡೆ ಮಾಡಿದರು   

ರಾಯಚೂರು: ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸದುದ್ದೇಶದಿಂದ ಏಪ್ರಿಲ್‌ 4 ಮತ್ತು 5 ರಂದು ಜಿಲ್ಲಾಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಇಂದಿನಿಂದಲೇ ನೋಂದಣಿ ಆರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಉದ್ಯೋಗ ಮೇಳದ ಪ್ರಚಾರ ಪರಿಕರಗಳು ಮತ್ತು ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ADVERTISEMENT

‘ತುಂಬಾ ಸರಳ ಅರ್ಜಿ ನಮೂನೆ’ ಇದ್ದು, ಎಸ್ಸೆಸ್ಸೆಲ್ಸಿ ಪಾಸ್‌, ಫೇಲ್‌ ವಿದ್ಯಾರ್ಥಿಗಳಿಂದ ಹಿಡಿದು ಪದವಿ ಹಾಗೂ ಕೆಲವು ವೃತ್ತಿಪರ ಕೋರ್ಸ್‌ಗಳ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗಾಗಿ ‍ಪ್ರತ್ಯೇಕ ‘ಆ್ಯಪ್‌’ ಕೂಡಾ ಮಾಡಲಾಗಿದೆ ಎಂದು ತಿಳಿಸಿದರು.

150 ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. 6 ರಿಂದ 8 ಸಾವಿರ ಯುವಕರು ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಈ ಉದ್ಯೋಗ ಮೇಳದಲ್ಲಿ ಐಟಿ, ಬಿಟಿ ಅಟೊಮೊಬೈಲ್ಸ್, ಮೆಕ್ಯಾನಿಕಲ್, ಕನ್ಸಸ್ಟ್ರಕ್ಷನ್, ಮಾರ್ಕೆಟಿಂಗ್, ಸೇಲ್ಸ್, ರಿಟೇಲ್, ಟೆಲಿಕಾಂ ಬಿಪಿಒ, ಟೆಕ್ಸ್‌ಟೈಲ್, ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್, ಹೆಲ್ತಕೇರ್, ಹೋಟೆಲ್ ನಿರ್ವಹಣೆ, ಮ್ಯಾನಿಫ್ಯಾಕ್ಷರಿಂಗ್ ಟ್ರಾನ್ಸ್‌ಪೋರ್ಟ್ ಸೇವೆ ಸೇರಿದಂತೆ ಅನೇಕ ಕಂಪೆನಿಗಳ ಭಾಗವಹಿಸಲಿವೆ ಎಂದು ಹೇಳಿದರು.

18 ರಿಂದ 35 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಬಹುದಾಗಿದೆ. ಸ್ವ–ವಿವರ ಪತ್ರ ಮತ್ತು ಅಂಕಪಟ್ಟಿ ನಕಲು ಪ್ರತಿಗಳಿರುವ 20 ಸೆಟ್‌ಗಳನ್ನು ತೆಗೆದುಕೊಂಡು ಬರಬೇಕು. ಉದ್ಯೋಗಕ್ಕೆ ಎಷ್ಟು ಕಂಪೆನಿಗಳಿಗೆ ಬೇಕಾದರೂ ಅರ್ಜಿ ಕೊಡಬಹುದು. ಆದರೆ, ಅಂತಿಮವಾಗಿ ಒಂದು ಕಂಪೆನಿಯನ್ನು ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08532-240182, ಮೊಬೈಲ್ ಸಂಖ್ಯೆ 9113296691 ಅಥವಾ 8095050436 ಸಂಪರ್ಕಿಸಬಹುದಾಗಿದೆ.

ವೆಬ್‌ಸೈಟ್‌: www.raichurudyogmela.com ಮತ್ತು raichurudyogmela ಮೊಬೈಲ್‌ ಆ್ಯಪ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಪ್ರೋಬೇಷನರಿ ಐಎಎಸ್ ಅಧಿಕಾರಿ ಯುಕೇಶ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.