ADVERTISEMENT

ಕಾಯಿಲೆ ನಿಯಂತ್ರಣಕ್ಕೆ ಕ್ರಮ ಜರುಗಸಲು ಆಗ್ರಹ

ಬಿಹಾರ ಮಕ್ಕಳ ಸಾವಿನ ದುರಂತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 13:40 IST
Last Updated 25 ಜೂನ್ 2019, 13:40 IST
ರಾಯಚೂರಿನಲ್ಲಿ ಮಂಗಳವಾರ ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಮಂಗಳವಾರ ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು   

ರಾಯಚೂರು: ಬಿಹಾರದ ಮಕ್ಕಳ ಸಾವಿನ ದುರಂತ ಪ್ರಕರಣದಲ್ಲಿ ಕಾಯಿಲೆ ನಿಯಂತ್ರಣಕ್ಕೆ ತುರ್ತು ಕ್ರಮ ಜರುಗಿಸಬೇಕು ಹಾಗೂ ಸಾವಿಗೀಡಾದ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮೆದುಳಿನ ಊರಿಯೂತ ಕಾಯಿಲೆಯಿಂದ ಬಿಹಾರದಲ್ಲಿ 150 ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. 600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಗಾಬರಿ ಹುಟ್ಟಿಸುವಂತಹ ವಿಷಯವಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ಪ್ರತೀ ವರ್ಷ ಮೇ– ಜೂನ್‌ ತಿಂಗಳಲ್ಲಿ ಲಿಚಿ ಹಣ್ಣಿನ ಕೊಯಿಲಿನ ಸಂದರ್ಭದಲ್ಲಿ ಈ ಕಾಯಿಲೆ ಮರುಕಳಿಸುತ್ತಿದೆ. ಬಡತನ ಹಾಗೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು ರಾತ್ರಿ ಊಟ ಮಾಡದೇ ಲಿಚಿ ಹಣ್ಣು ತಿಂದು ಮಲಗಿದರೆ ಈ ಕಾಯಿಲೆ ಬರುತ್ತದೆ ಎಂಬುದು ತಜ್ಞ ವೈದ್ಯರ ಅಧ್ಯಯನದಿಂದ ತಿಳಿದುಬಂದಿದೆ. ರಾತ್ರಿ ಊಟ ಮಾಡದೇ ಮಲಗಬಾರದು ಎಂಬ ಅರಿವನ್ನು ಸರ್ಕಾರ ಮೂಡಿಸಬೇಕಿತ್ತು. ಆದರೆ, ಸರ್ಕಾರಿ ಆಡಳಿತ ವ್ಯವಸ್ಥೆ ಚುನಾವಣೆಯ ತಯಾರಿಯಲ್ಲಿ ಮುಳುಗಿಹೋಗಿ ಮುಂಜಾಗ್ರತೆ ವಹಿಸಲು ವೈಫಲ್ಯವಾಗಿದ್ದು, ಈ ದುರಂತಕ್ಕೆ ಕಾರಣವಾಗಿದೆ ಎಂದು ದೂರಿದರು.

ADVERTISEMENT

ನೂರಾರು ಮಕ್ಕಳ ಸಾವಿನ ದುರಂತದ ಪರಿಶೀಲನಾ ಸಭೆಯಲ್ಲೂ ಆರೋಗ್ಯ ಸಚಿವ ವಿಕೆಟ್ ಎಷ್ಟು ಬಿತ್ತು ಎಂದು ಕ್ರಿಕೆಟ್ ಬಗ್ಗೆ ವಿಚಾರಿಸಿರುವುದು ಲೋಪ ಎತ್ತಿತೋರಿಸುತ್ತದೆ. ಗ್ರಾಮೀಣ ಭಾಗದಲ್ಲಿ ಈ ಕಾಯಿಲೆಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಜೀವ ಉಳಿಸಲು ಸಾಧ್ಯವಾಗಲಿದೆ. ಆದರೆ, ಸೌಲಭ್ಯಗಳು ಇಲ್ಲವಾಗಿವೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಪರಿಹಾರ ನೀಡುವುದರಿಂದ ದುಃಖ ಕಡಿಮೆ ಮಾಡಲಾಗಲ್ಲ. ಆದರೂ, ಮುಂದಿನ ಬದುಕು ಕಟ್ಟಿಕೊಳ್ಳಲು ಕನಿಷ್ಟ ₨10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯ ಎಂ.ಶಶಿಧರ, ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ, ಎಂ.ರಾಮಣ್ಣ, ಚನ್ನಬಸವ ಜಾನೇಕಲ್, ಎನ್.ಎಸ್.ವೀರೇಶ, ಮಹೇಶ ಚೀಕಲಪರ್ವಿ, ಪ್ರಮೋದ ಕುಮಾರ, ತಿರುಮಲರಾವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.