ರಾಮನಗರ: ‘ದೇಶಕ್ಕೆ ಉತ್ತಮ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಶೈಕ್ಷಣಿಕ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಲ್.ಚಂದ್ರಶೇಖರ್ ಹೇಳಿದರು.
ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎನ್ಎಸ್ಯುಐ ವತಿಯಿಂದ ಹಮ್ಮಿಕೊಂಡಿದ್ದ ಆರ್ಟಿಇ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಾಗತೀಕ ಪ್ರಪಂಚದಲ್ಲಿ ದೇಶ ತನ್ನದೇ ಆದ ಸ್ಥಾನ ಪಡೆದುಕೊಳ್ಳಬೇಕಾದರೆ ಹಲವು ಸಾಧನೆ ಮಾಡಬೇಕು. ಆದರೆ ಅದರಲ್ಲಿ ವಿದ್ಯಾರ್ಥಿಗಳ ಪಾತ್ರವೂ ಮಹತ್ವದಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆದುಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದರು.
ನಿವೃತ್ತ ವಕೀಲ ತಿಮ್ಮೇಗೌಡ ಮಾತನಾಡಿ, ‘ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಮತ್ತು ಉಚಿತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರ್ಟಿಇ ಕಾಯ್ದೆ ತಂದಿದೆ. ಇದರ ಸದುಪಯೋಗ ಆಗಬೇಕು. ಅನರ್ಹರು ಈ ಯೋಜನೆಯನ್ನು ಕಬಳಿಸಲು ಬರಬಾರದು’ ಎಂದು ಮನವಿ ಮಾಡಿದರು.
ಎನ್ಎಸ್ಯುಐ ಜಿಲ್ಲಾಧ್ಯಕ್ಷ ಅನಿಲ್ ಜೋಗಿಂದರ್ ಮಾತನಾಡಿ, ‘ಕೆಲವು ವಿದ್ಯಾಸಂಸ್ಥೆಗಳು ಅರ್ಹರಿಗೆ ನೀಡಬೇಕಿರುವ ಸೀಟನ್ನು ಶ್ರೀಮಂತರಿಗೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಹಾಗಾಗಿಯೇ ರಾಜ್ಯದಾದ್ಯಂತ ಸಾರ್ವಜನಿಕರಿಗೆ ಅರಿವು ಮೂಡಿಸಲು ಆಂದೋಲನ ನಡೆಸಲಾಗುತ್ತಿದೆ’ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎನ್.ಆರ್.ವೆಂಕಟೇಶ್, ಎನ್ಎಸ್ಯುಐ ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್, ರಾಜ್ಯ ಕಾರ್ಯದರ್ಶಿ ಶಶಿಕುಮಾರ್, ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ನೇತ್ರಕುಮಾರ್, ಪದಾಧಿಕಾರಿಗಳಾದ ಚೇತನ್, ಸಾಗರ್, ಚಂದು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.