ರಾಮನಗರ: ಜಿಲ್ಲೆಯಲ್ಲಿ ಚಳಿ ಕಡಿಮೆಯಾಗಿ ಬಿಸಿಲಿನ ಝಳ ಹೆಚ್ಚುತ್ತಿದೆ. ಮುಂಜಾನೆ ಚಳಿ ಇದ್ದರೂ ಮಧ್ಯಾಹ್ನದ ವೇಳೆಗೆ ಸೂರ್ಯ ನೆತ್ತಿ ಸುಡುತ್ತಾನೆ. ಹೀಗಾಗಿ, ನಾಗರಿಕರು ಕಲ್ಲಂಗಡಿ ಹಣ್ಣು ತಿಂದು ದೇಹ ತಂಪು ಮಾಡಿಕೊಳ್ಳುತ್ತಿದ್ದಾರೆ.
ಮಾಗಿಯ ಚಳಿ ಮಾಸುವ ಮುನ್ನವೇ ನಗರದಲ್ಲಿ ಕಲ್ಲಂಗಡಿ ಹಣ್ಣುಗಳ ಮಾರಾಟ ಭರಾಟೆ ಪ್ರಾರಂಭವಾಗಿದೆ.
ನಗರದ ಬೆಂಗಳೂರು–ಮೈಸೂರು ರಸ್ತೆಯಲ್ಲಿ ಹಣ್ಣಿನ ಅಂಗಡಿಗಳನ್ನು ತೆರೆಯಲಾಗಿದ್ದು, ವ್ಯಾಪಾರ ವಹಿವಾಟು ಬಿರುಸಿನಿಂದ ಸಾಗಿದೆ.
ಪ್ರತಿ 1 ಕೆ.ಜಿ ಕಲ್ಲಂಗಡಿ ಬೆಲೆ 15 ರೂಪಾಯಿ ನಿಗದಿಪಡಿಸಲಾಗಿದೆ.
ಜಿಲ್ಲೆಯಲ್ಲಿ ನೀರಿನ ಅಭಾವವಿರುವುದರಿಂದ ಕಲ್ಲಂಗಡಿ ಬೆಳೆ ಬೆಳೆಯುವವರು ತೀರಾ ಅಪರೂಪ. ಹಾಗಾಗಿ ಇಲ್ಲಿನ ವ್ಯಾಪಾರಿಗಳು ಆಂಧ್ರಪ್ರದೇಶದಿಂದ ಕಲ್ಲಂಗಡಿ ತಂದು ಮಾರಾಟ ಮಾಡುತ್ತಿದ್ದಾರೆ.
‘ಬಿಸಿಲು ಹೆಚ್ಚುತ್ತಿದ್ದಂತೆ ದೇಹ ಒಣಗುತ್ತದೆ. ಊಟದ ಬದಲು ತಂಪು ಪಾನೀಯ ಹಾಗೂ ತಾಜಾ ಹಣ್ಣುಗಳನ್ನು ಸೇವಿಸಲು ಮನಸಾಗುತ್ತದೆ. ಕಲ್ಲಂಗಡಿ ಹಣ್ಣು ಹೆಚ್ಚು ತಂಪು ಮತ್ತು ನೀರಿನ ಅಂಶವನ್ನು ಒದಗಿಸುವುದರಿಂದ ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ಯಥೇಚ್ಛವಾಗಿ ಸೇವಿಸುತ್ತೇನೆ ಎನ್ನುತ್ತಾರೆ’ ನಗರದ ನಿವಾಸಿ ಎಚ್.ಪಿ. ನಂಜೇಗೌಡ.
‘ಬಿಸಿಲು ಹೆಚ್ಚಾದಂತೆ ಕಲ್ಲಂಗಡಿ ಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ದಿನೇ ದಿನೇ ವ್ಯಾಪಾರ ಹೆಚ್ಚುತ್ತಿದೆ ಎನ್ನುತ್ತಾರೆ ಕಲ್ಲಂಗಡಿ ಅಂಗಡಿ ಮಾಲೀಕ ಫಯಾಜ್ ಪಾಷಾ.
‘ಅಂಗಡಿಗಳಲ್ಲಿ ರಾಸಾಯನಿಕ ಮಿಶ್ರಣವಾಗಿರುವ ತಂಪು ಪಾನೀಯಗಳನ್ನು ಸೇವಿಸುವುದಕ್ಕಿಂತ ತಾಜಾ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ ಕಲ್ಲಂಗಡಿ ಮೆಲ್ಲುವುದೇ ಒಂದು ರೀತಿಯ ಮಜಾ ಎನ್ನುತ್ತಾರೆ ಗ್ರಾಹಕ ಶಫೀರ್.
ರಸ್ತೆ ಬದಿಯಲ್ಲಿ ಕತ್ತರಿಸಿ ಮಾರುವ ಹಣ್ಣುಗಳನ್ನು ಸೇವಿಸುವವರ ಸಂಖ್ಯೆ ಅಧಿಕವಾಗಿದೆ. ಹೀಗೆ ಕತ್ತರಿಸಿಟ್ಟ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನೊಣ, ಇತರೆ ಕೀಟಗಳು ಹಣ್ಣುಗಳನ್ನು ಮುತ್ತಿಕೊಳ್ಳುತ್ತವೆ. ಅಲ್ಲದೆ ದೂಳು ಸಹಾ ಮೆತ್ತಿಕೊಳ್ಳುತ್ತದೆ. ಕತ್ತರಿಸಿದ ಹಣ್ಣುಗಳನ್ನು ಮುಚ್ಚಿಟ್ಟ ಬಾಕ್ಸ್ಗಳಲ್ಲಿ ಮಾರಾಟ ಮಾಡುವುದು ಒಳಿತು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಬಿ. ವಿನಯ್ಕುಮಾರ್ ತಿಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.