ADVERTISEMENT

ತೆಂಗು ಬೆಳೆಗಾರರ ರಕ್ಷಣೆಗೆ ಧಾವಿಸಲು ಎಚ್.ಡಿ.ದೇವೇಗೌಡ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 6:16 IST
Last Updated 9 ಜುಲೈ 2013, 6:16 IST

ಕನಕಪುರ: `ರಾಜ್ಯದಲ್ಲಿ ತೆಂಗು ಬೆಳೆಗೆ ಕಪ್ಪುತಲೆ ಹುಳು ಬಾಧೆ ತಗುಲಿರುವ ಹಿನ್ನೆಲೆಯಲ್ಲಿ ತೆಂಗು ಬೆಳೆಗಾರರ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಯೋಜನೆ ರೂಪಿಸಬೇಕು' ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಒತ್ತಾಯಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಕುರುಬಳ್ಳಿಯಲ್ಲಿ ಸೋಮವಾರ ಕಪ್ಪುತಲೆ ಹುಳು ಬಾಧೆಯಿಂದ ಒಣಗಿರುವ ತೆಂಗಿನ ಮರಗಳನ್ನು ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

`ತೆಂಗು ಬೆಳೆಗಾರರ ಪರವಾಗಿ ನಡೆಸುತ್ತಿರುವ ನನ್ನ ಈ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲ. ರಾಜ್ಯದಲ್ಲಿ ತೆಂಗನ್ನು ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ತೆಂಗಿನ ಗರಿಯನ್ನು ತಿನ್ನುವ ಕಪ್ಪುತಲೆ ಹುಳುವಿನಿಂದ ತೆಂಗಿನ ಮರಗಳ ಗರಿ ಒಣಗಿ ಹೋಗುತ್ತಿವೆ. ಇದರಿಂದ ಇವುಗಳನ್ನು ಆಶ್ರಯಿಸಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಾನು ರಾಜ್ಯದಾದ್ಯಂತ ಈ ಪ್ರವಾಸ ಕೈಗೊಂಡಿದ್ದೇನೆ' ಎಂದು ಅವರು ಸ್ಪಷ್ಟಪಡಿಸಿದರು.

`ನೆರೆಯ ಕೇರಳ ರಾಜ್ಯದಲ್ಲಿಯೂ ತೆಂಗಿಗೆ ಇದೇ ರೀತಿಯ ರೋಗ ಕಾಣಿಸಿಕೊಂಡಿದೆ. ಅಲ್ಲಿನ ಸರ್ಕಾರ ರೋಗಗ್ರಸ್ತ ತೆಂಗಿನ ಮರಗಳನ್ನು ಕಡಿದು ಹೊಸದಾಗಿ ತೆಂಗು ಬೆಳೆಸುವ ಯೋಜನೆ ರೂಪಿಸಿದೆ. ಇದಕ್ಕಾಗಿ ಮೂರು ಹಂತಗಳಲ್ಲಿ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಒಂದು ತೆಂಗಿನ ಮರಕ್ಕೆ 15 ಸಾವಿರ ರೂಪಾಯಿವರೆಗೂ ರೈತರಿಗೆ ಪರಿಹಾರ ನೀಡಲಾಗುತ್ತಿದೆ. ಇದೇ ರೀತಿ  ರಾಜ್ಯದಲ್ಲಿಯೂ ಕೇರಳ ಮಾದರಿ ಯೋಜನೆ ರೂಪಿಸಬೇಕು' ಎಂದು ಅವರು ಆಗ್ರಹಿಸಿದರು.

ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ,ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್, ತಾಲ್ಲೂಕು ಅಧ್ಯಕ್ಷ ಸಿದ್ದಮರೀಗೌಡ, ಬಿ.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತುಂಗಣಿ ಪುಟ್ಟಸ್ವಾಮಿ, ಡಿ.ಎಸ್. ಭುಜಂಗಯ್ಯ, ತಾ.ಪಂ. ಸದಸ್ಯರಾದ ರಾಮಕೃಷ್ಣ, ಕೊಳ್ಳಿಗನಹಳ್ಳಿ ರಾಮು, ಶಿವನಹಳ್ಳಿ ಹಲಗಪ್ಪ, ಮುಖಂಡರಾದ ತೋಟಳ್ಳಿ ನಾರಾಯಣ, ಸೋಮು, ವಿಶಲಾಕ್ಷ (ರವಿ), ಸ್ಟುಡಿಯೊ ಚಂದ್ರು, ಬಿ.ಎಂ.ರಾಜು, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.