ADVERTISEMENT

ಬೌದ್ಧ ವಸ್ತು ಸಂಗ್ರಹಾಲಯ ರಾಮನಗರಕ್ಕೆ!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 9:09 IST
Last Updated 27 ಅಕ್ಟೋಬರ್ 2017, 9:09 IST
ಧರ್ಮಶಾಲಾದಲ್ಲಿನ ಸಂಗ್ರಹಾಲಯದಲ್ಲಿರುವ ಹಸ್ತಪ್ರತಿಗಳು- (ಸಂಗ್ರಹ ಚಿತ್ರ)
ಧರ್ಮಶಾಲಾದಲ್ಲಿನ ಸಂಗ್ರಹಾಲಯದಲ್ಲಿರುವ ಹಸ್ತಪ್ರತಿಗಳು- (ಸಂಗ್ರಹ ಚಿತ್ರ)   

ರಾಮನಗರ: ಬೌದ್ಧ ಪರಂಪರೆಯ ಅಪರೂಪದ ದಾಖಲೆಗಳು, ಹಸ್ತಪ್ರತಿಗಳು, ಕಲಾಕೃತಿಗಳನ್ನು ಒಳಗೊಂಡ ಸಂಗ್ರಹಾಲಯ ಹಾಗೂ ಅಧ್ಯಯನ ಕೇಂದ್ರವೊಂದನ್ನು ರಾಮನಗರ ಜಿಲ್ಲೆಯಲ್ಲಿ ಆರಂಭಿಸಲು ಸಿದ್ಧತೆ ನಡೆದಿದೆ. ಸದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ವಸ್ತು ಸಂಗ್ರಹಾಲಯವಿದ್ದು, ಅದನ್ನು ಹಂತಹಂತವಾಗಿ ರಾಮ
ನಗರಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ.

ಅಲ್ಲಿ ಭೂಕಂಪನದಿಂದ ಆಗಬಹುದಾದ ಹಾನಿ ತಪ್ಪಿಸಲು ಈ ಸ್ಥಳಾಂತರ ನಡೆಯುತ್ತಿದೆ. ಮುಖ್ಯವಾಗಿ ಚೀನಾದ ದಾಳಿಯ ಭೀತಿಯೂ ಟಿಬೆಟನ್ನರನ್ನು ಕಾಡುತ್ತಿದ್ದು, ಧರ್ಮಗುರು ದಲೈಲಾಮ ಅವರೇ ವಸ್ತು ಸಂಗ್ರಹಾಲಯದ ಸ್ಥಳಾಂತರಕ್ಕೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಟಿಬೆಟನ್ನರ ಐತಿಹಾಸಿಕ ದಾಖಲೆ ನಿರ್ವಹಿಸುತ್ತಿರುವ ಲೈಬ್ರರಿ ಆಫ್‌ ಟಿಬೆಟನ್‌ ವರ್ಕ್ಸ್‌ ಅಂಡ್‌ ಆರ್ಕೈವ್ಸ್‌ (ಎಲ್‌ಟಿಡಬ್ಲ್ಯುಎ) ಈ ಕೇಂದ್ರದ ಸ್ಥಾಪನೆಯ ಯೋಜನೆ ರೂಪಿಸುತ್ತಿದೆ. ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಶೇಷಗಿರಿಹಳ್ಳಿ ಬಳಿ ಈ ಉದ್ದೇಶಿತ ಸಂಗ್ರಹಾಲಯ ಸ್ಥಾಪನೆಗೊಳ್ಳಲಿದೆ

ADVERTISEMENT

ಶೇಷಗಿರಿಹಳ್ಳಿಯಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ದಲೈಲಾಮಾ ಉನ್ನತ ಶಿಕ್ಷಣ ಕೇಂದ್ರ  ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಇದರ ಪಕ್ಕದಲ್ಲಿಯೇ ಸುಮಾರು 3.8 ಎಕರೆ ಜಾಗ ಈ ಉದ್ದೇಶಿತ ಸಂಗ್ರಹಾಲಯಕ್ಕಾಗಿ ಮೀಸಲಿರಿಸಿದೆ. ಈಗಾಗಲೇ ಈ ಯೋಜನೆ ಸಿದ್ಧವಾಗಿದ್ದು, ₹ 52.8 ಕೋಟಿ ವೆಚ್ಚವನ್ನು ಒಳಗೊಂಡಿದೆ. ಈ ಯೋಜನೆ ಕಾರ್ಯಗತಗೊಂಡಿದ್ದೇ ಆದಲ್ಲಿ ಇದೊಂದು ಅಪರೂಪದ ಸಂಗ್ರಾಹಾಲಯವಾಗಲಿದೆ.\

ಭೂಕಂಪನ ಭೀತಿ: ಟಿಬೆಟನ್ನರಿಗೆ ಸಂಬಂಧಿಸಿದ ಎಲ್ಲ ಅಪರೂಪದ ದಾಖಲೆ ನಿರ್ವಹಿಸುವ ಸಲುವಾಗಿ 14ನೇ ದಲೈಲಾಮ ಅವರು 1970ರಲ್ಲಿ ಎಲ್‌ಟಿಡಬ್ಲ್ಯುಎ ಅನ್ನು ಸ್ಥಾಪಿಸಿದರು. ಈ ಸಂಸ್ಥೆಯು ಸದ್ಯ 80ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳು, ಅಪರೂಪದ ಛಾಯಾಚಿತ್ರ, ವರ್ಣಚಿತ್ರ, ಕೃತಿಗಳು ಹಾಗೂ ಕಲಾಕೃತಿಗಳನ್ನು ಒಳಗೊಂಡಿದೆ. ಇವುಗಳನ್ನು ಧರ್ಮಶಾಲಾದಲ್ಲಿ ಇರುವ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.

ಆದರೆ. ಈ ಪ್ರದೇಶ ಹಿಮಾಲಯ ಪರ್ವತಗಳ ಅಂಚಿನಲ್ಲಿ ಇದ್ದು, ಅತಿಹೆಚ್ಚು ಭೂಕಂಪನ  ಸಂಭವಿಸುವ ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಅಲ್ಲಿ ಅಪರೂಪದ ದಾಖಲೆಗಳನ್ನು ಇಡುವುದು ಸೂಕ್ತವಲ್ಲ ಎಂದು ಎಲ್‌ಟಿಡಬ್ಲ್ಯುಎ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ದೇಶದ ವಿವಿಧೆಡೆ ಉಪ ಕೇಂದ್ರಗಳನ್ನು ತೆರೆದು ಅಲ್ಲಿ ಅವುಗಳನ್ನು ಸಂರಕ್ಷಿಸಲು ಮುಂದಾಗಿದೆ. ಈ ಯೋಜನೆಯ ಭಾಗವಾಗಿ ಮೊದಲು ರಾಮನಗರದಲ್ಲಿ ಸಂಗ್ರಹಾಲಯ ಆರಂಭಕ್ಕೆ ಉದ್ದೇಶಿಸಲಾಗಿದೆ.

ಹಣಕಾಸಿನ ಕೊರತೆ: ಯೋಜನೆಯ ಅನುಷ್ಠಾನಕ್ಕೆ ಹಣಕಾಸಿನ ಕೊರತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದು, ವಂತಿಗೆ ಮೂಲಕ ಹಣ ಸಂಗ್ರಹಣೆಗೆ ಮುಂದಾಗಿದ್ದಾರೆ. ನಿರ್ದಿಷ್ಟ ಮೊತ್ತ ಸಂಗ್ರಹವಾದ ಬಳಿಕವಷ್ಟೇ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.