ರಾಮನಗರ: ತಾಲ್ಲೂಕಿನ ಕೆಂಪನಹಳ್ಳಿ ಗೇಟ್ ಬಳಿ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಕೇರಳ ರಾಜ್ಯದವರಾದ ಜೋಯಲ್ ಜಾಕೊಬ್, ನಿಖಿತ್ ಸುದೀಪ್, ಝೀನಾ ಯಲ್ಡೊ ಮತ್ತು ರುಬೇಕಾ ಮೃತರು.
ಎಲ್ಲರೂ 20–21ರ ವಯೋಮಾನದವರು. ಈ ಪೈಕಿ ಜಾಕೊಬ್ ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ನಿಖಿತ್ ಕೇರಳದ ಭಾರತ್ ಮಾತಾ ಕಾಲೇಜಿನಲ್ಲಿ ಸಿ.ಎ. ಓದುತ್ತಿದ್ದರು. ಉಳಿದ ಇಬ್ಬರು ತಮಿಳುನಾಡಿನ ವೆಲ್ಲೂರಿನ ವಿಐಟಿ ಕಾಲೇಜು ವಿದ್ಯಾರ್ಥಿಗಳು.
ಬೆಳಿಗ್ಗೆ 3.30ರ ಸುಮಾರಿಗೆ ಎಲ್ಲರೂ ಕಾರಿನಲ್ಲಿ ಬೆಂಗಳೂರು ಕಡೆಗೆ ಹೊರಟಿದ್ದರು. ಆಗ ಕಾರ್ ರಸ್ತೆ ವಿಭಜಕವನ್ನು ದಾಟಿ ವಿರುದ್ಧ ಕಡೆಗೆ ತಿರುಗಿದೆ. ಆಗ ಎದುರಿನಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಒಳಗಿದ್ದ ನಾಲ್ವರೂ ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.