ADVERTISEMENT

ರಸಗೊಬ್ಬರ ಮಾರಾಟ ಕೇಂದ್ರ ತೆರೆಯಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:52 IST
Last Updated 26 ಸೆಪ್ಟೆಂಬರ್ 2013, 6:52 IST

ಚನ್ನಪಟ್ಟಣ: ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ರಸಗೊಬ್ಬರ ಮಾರಾಟ ಕೇಂದ್ರ ತೆರೆಯಲು ಚಿಂತಿಸಲಾಗುವುದು ಎಂದು ಸಂಘದ ಅಧ್ಯಕ್ಷ ಜಿ.ಕೃಷ್ಣೇಗೌಡ ಹೇಳಿದರು.

ಬುಧವಾರ ಪಟ್ಟಣದ ಸಾತನೂರು ರಸ್ತೆಯ ಅಕ್ಕಿಗಿರಣಿ ಆವರಣದಲ್ಲಿ ಏರ್ಪಡಿಸಿದ್ದ ಸಂಘದ ಪ್ರಸಕ್ತ ಸಾಲಿನ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಆವರಣದಲ್ಲಿ ಹಾಪ್‌ಕಾಮ್ಸ್‌ನ ರಸ ಗೊಬ್ಬರ ಮಳಿಗೆ ಇದ್ದು, ಇದು ಸ್ಥಳಾಂತ ರಗೊಂಡ ನಂತರ ಸಂಘದ ವತಿಯಿಂದ ರಸಗೊಬ್ಬರ ಮಳಿಗೆ ತೆರೆಯ ಲಾಗುವುದು ಎಂದರು.

ತಾಲ್ಲೂಕಿನ ರೈತರಿಗೆ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಕೊಳ್ಳಲು ಸಮಸ್ಯೆಯಾಗುತ್ತಿದ್ದು, ರೈತರಿಗೆ ಅನು ಕೂಲ ಮಾಡಿಕೊಡುವ ಉದ್ದೇಶದಿಂದ ಸಂಘದ ವತಿಯಿಂದಲೇ ರಸಗೊಬ್ಬರ ಮಳಿಗೆ ಹಾಗೂ ಕೃಷಿ ಪರಿಕರಗಳ ಮಾರಾಟ ಕೇಂದ್ರ ತೆರೆಯುವಂತೆ ಸದಸ್ಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೃಷ್ಣೇಗೌಡರು ಈ ಭರವಸೆ ನೀಡಿದರು.

ಸಂಘದ ಹೆಸರಿನಲ್ಲಿ ಉಪಯುಕ್ತ ವಿಶಾಲ ನಿವೇಶನವಿದ್ದು, ಇಲ್ಲಿ ಸರ್ಕಾರದ ನೆರವಿನೊಂದಿಗೆ ಕಲ್ಯಾಣ ಮಂಟಪ ಅಥವಾ ಸಮುದಾಯ ಭವನ ನಿರ್ಮಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಹಲವು ಸದಸ್ಯರು ಈ ಸಂದರ್ಭದಲ್ಲಿ ಆಗ್ರ ಹಿಸಿದರು.

ಸಂಘದ ಖಾಲಿ ಜಾಗದಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನ, ವ್ಯಾಪಾರ ಮಳಿಗೆಗಳನ್ನು ತೆರೆಯುವ ಉದ್ದೇಶ ಸಂಘಕ್ಕಿದೆ. ಮುಂದಿನ ದಿನ ಗಳಲ್ಲಿ ಈ ಬಗ್ಗೆ ಕಾರ್ಯ ಪ್ರವೃತ್ತ ವಾಗುತ್ತೇವೆ ಎಂದು ತಿಳಿಸಿದರು.

ಸಂಘದ ನಿರ್ದೇಶಕರಾದ ಸೋಮಣ್ಣ, ರಂಗಸ್ವಾಮಿ, ಶಿವಲಿಂಗೇಗೌಡ, ಎಂ.ಪಿ.ಚಂದ್ರಶೇಖರ್, ಎಸ್.ಸಿ.ಗಂಗರಾಜು, ಸೀನಪ್ಪ, ರಂಗನಾಥ್, ಕಾರ್ಯದರ್ಶಿ ಗಿರಿರಾಜು  ಭಾಗವಹಿಸಿದ್ದರು. ಟಿಎಪಿಸಿಎಂಎಸ್‌ ನೌಕರಯೋಗೇಶ್‌ ದ್ಯಾವಪಟ್ಟಣ ಪ್ರಾರ್ಥಿಸಿದರು. ನೌಕರ ನಾಗಣ್ಣಗೌಡ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.