ಕಸಬಾ (ಕನಕಪುರ): ಇಲ್ಲಿನ ಎಚ್.ಕೊತ್ತನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಸಾಲಗಾರರಲ್ಲದ 1 ಕ್ಷೇತ್ರ ಮತ್ತು ಸಾಲಗಾರರ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆಯಾದವರು: ಸಾಲಗಾರರಲ್ಲದ ಕ್ಷೇತ್ರದಿಂದ ಕಾಂತರಾಜು, ಸಾಲಗಾರರ ಕ್ಷೇತ್ರದಿಂದ ಮಂಜಯ್ಯ, ಅಲಮೇಲಮ್ಮ, ರಂಗಶೆಟ್ಟಿ.
12 ಸ್ಥಾನಗಳಿಗೆ ಚುನಾವಣೆ ಪ್ರಕಟಿಸಿದ್ದು, 47 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಚಿಕ್ಕಮಾರಯ್ಯ ಮತ್ತು ಕರಿಯಪ್ಪ ಅವರ ಅರ್ಜಿಗಳು ತಿರಸ್ಕೃತಗೊಂಡವು. 26 ಅರ್ಜಿದಾರರು ನಾಮಪತ್ರವನ್ನು ಹಿಂಪಡೆದಿದ್ದರಿಂದ 4 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.
ಉಳಿದ 8 ಸ್ಥಾನಗಳಿಗೆ 15 ಮಂದಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ 8 ಮಂದಿ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ. ಒಬ್ಬರು ಬಂಡಾಯ ಮತ್ತು 6 ಬಿಜೆಪಿ ಬೆಂಬಲಿತ ಸೇರಿ 7 ಮಂದಿ ಎದುರಾಳಿಯಾಗಿ ಚುನಾವಣಾ ಕಣದಲ್ಲಿದ್ದಾರೆ. 864 ಅರ್ಹ ಮತದಾರರಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿವೆ. ಕಾಂಗ್ರೆಸ್ 9 ಸ್ಥಾನ, ಜೆಡಿಎಸ್ ಗೆ 3 ಸ್ಥಾನವನ್ನು ಹಂಚಿಕೆ ಮಾಡಿಕೊಂಡಿವೆ. ಅವಿರೋಧವಾಗಿ ಆಯ್ಕೆಯಾಗಿರುವ 4 ಮಂದಿಯೂ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ.
ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಇಲ್ಲದಂತೆ ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದ್ದವು. ಈ ನಡುವೆ ಬಿಜೆಪಿಯೂ 6 ಮಂದಿಯನ್ನು ಕಣ್ಣಕ್ಕಿಳಿಸಿದ ಕಾರಣ ಚುನಾವಣೆ ಅನಿವಾರ್ಯವಾಗಿದೆ.
ಎಲ್ಲರನ್ನೂ ಅವಿರೋಧವಾಗಿ ಆಯ್ಕೆ ಮಾಡುವ ಕಾಂಗ್ರೆಸ್– ಜೆಡಿಎಸ್ ಮೈತ್ರಿ ತಂಡದ ಪ್ರಯತ್ನ ವಿಫಲವಾಗಿದ್ದು ಜ. 30 ರಂದು ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.