ರಾಮನಗರ: ಅಂಗವಿಕಲ ಸಯ್ಯದ್ ತೌಸಿಫ್ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಸ್ಲಿಂ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇಲ್ಲಿನ ಟೌನ್ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಅಧಿಕಾರಿಗಳಿಂದ, ರಾಜಕಾರಣಿಗಳಿಂದ ದಬ್ಬಾಳಿಕೆ, ದೌರ್ಜನ್ಯದ ಪ್ರಕರಣಗಳು ನಡೆಯುತ್ತಲೇ ಇವೆ. ದೂರು ದಾಖಲಿಸಿದರೂ ನ್ಯಾಯ ಸಿಗುತ್ತಿಲ್ಲ ಎಂದು ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಮಹಮದ್ ಫಾರೂಖ್ ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಪೊಲೀಸರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಜತೆಗೆ ಸಮಾಜದಲ್ಲಿನ ಸಾಮರಸ್ಯವೂ ಹಾಳಾಗುತ್ತಿದೆ ಎಂದು ದೂರಿದರು.
ವಕೀಲ ಚಾನ್ ಪಾಷಾ ಮಾತನಾಡಿ, ಸಯ್ಯದ್ ತೌಸಿಫ್ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ಅಮಾನತ್ತಿನಲ್ಲಿಟ್ಟು ವಿಚಾರಣೆ ನಡೆಸಬೇಕು. ಜತೆಗೆ ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ನ್ಯಾಯಯುತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಗಂಭೀರ ಪ್ರಕರಣ ನಡೆದರೂ ಜಿಲ್ಲಾಡಳಿತ ಇದುವರೆಗೂ ಯಾವುದೇ ರೀತಿ ಕ್ರಮಕೈಗೊಂಡಿಲ್ಲ. ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರಿದ್ದಾರೆ. ಈ ಜಿಲ್ಲೆಯಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮುಖ್ಯಮಂತ್ರಿ, ಸಚಿವ ಸ್ಥಾನ ಅಲಂಕರಿಸಿದ್ದಾರೆ. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದರು.
ಮುಖಂಡರಾದ ಸೈಯದ್ ಶಹಬಾಜ್, ಆಮ್ಜದ್ ಷರೀಫ್, ಸೈಯದ್ ಅಸಾದುಲ್ಲಾ, ಹುಮಾಯೂನ್, ಸುಲ್ತಾನ್, ವಸೀಂ, ಆರೀಫ್ ಪಾಷಾ, ಸೈಯದ್ ಮತೀನ್, ಮಹಬೂಬ್ ಪಾಷಾ, ಇಮ್ರಾನ್ ರಫಾಯಿ, ಶಖೀಲ್ ಪಾಷಾ, ಇದಾಯುತ್ ಖಾನ್, ನಾಸಿರ್, ಅಜೀಜುಲ್ಲಾ ಷರೀಫ್, ಅಯಜ್ ಪಾಷಾ, ಇಮ್ರಾನ್ ಪಾಷಾ, ಖಯೂಂ ಪಾಷಾ, ಲಿಯಾಕತ್, ತಬರೇಜ್ ಆಲಿಖಾನ್, ಸುಲ್ತಾನ್ ಆಲಿಖಾನ್, ರಿಜ್ವಾನ್, ಜುಬೇರ್, ರಫೀಕ್, ಜಮೀರ್, ತಾಜೀಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.