ADVERTISEMENT

ಬಿಜೆಪಿಗೆ ಬೂತ್‌ ಏಜೆಂಟರೇ ಇಲ್ಲ: ತಾಮಸಂದ್ರ ಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 14:05 IST
Last Updated 16 ಏಪ್ರಿಲ್ 2019, 14:05 IST
ಆನಮಾನಹಳ್ಳಿ ಗ್ರಾಮದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮುಖಂಡರು ಚುನಾವಣಾ ಪ್ರಚಾರ ನಡೆಸಿದರು 
ಆನಮಾನಹಳ್ಳಿ ಗ್ರಾಮದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮುಖಂಡರು ಚುನಾವಣಾ ಪ್ರಚಾರ ನಡೆಸಿದರು    

ಕನಕಪುರ: ‘ಡಿ.ಕೆ.ಸುರೇಶ್‌ ಅವರು ತಾಲ್ಲೂಕಿನಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅದರ ಆಧಾರದ ಮೇಲೆ ನಾವು ಚುನಾವಣಾ ಪ್ರಚಾರ ಮಾಡಿ ಮತ ಕೇಳುತ್ತಿದ್ದೇವೆ’ ಎಂದು ಮುಖಂಡ ಎಂ.ಪುರುಷೋತ್ತಮ್‌ ಹೇಳಿದರು.

ತಾಲ್ಲೂಕಿನ ಕಲ್ಲಹಳ್ಳಿ ಮತ್ತು ತುಂಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ, ಆನಮಾನಹಳ್ಳಿ, ಆಡನಕುಪ್ಪೆ, ರೈಸಮಿಲ್‌, ತಾಮಸಂದ್ರ, ಛತ್ರ, ತುಂಗಣಿ, ಹರಳಾಳುಸಂದ್ರ, ವರಗೇರಹಳ್ಳಿ, ಹೊಸಕೋಟೆ, ರಾಯಸಂದ್ರ, ಗೋಪಸಂದ್ರ ಮುಂತಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

‘ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಿವೆ. ಹಾಗಾಗಿ ನಾವು ಅದರ ಆಧಾರದ ಮೇಲೆ ಮತ ಯಾಚಿಸುತ್ತಿದ್ದೇವೆ. ಜನರು ಸುರೇಶ್‌ಗೆ ಮತ ನೀಡಲು ಉತ್ಸುಕರಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಯಸಂದ್ರ ರವಿ ಮಾತನಾಡಿ ‘ಜೆಡಿಎಸ್‌ ಕಾಂಗ್ರೆಸ್‌ ಪಕ್ಷದವರು ಜಂಟಿಯಾಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇವೆ. ಎಲ್ಲೆಡೆ ಸುರೇಶ್‌ ಅವರಿಗೆ ಮತ ನೀಡುತ್ತೇವೆ ಎಂಬ ಕೂಗು ಕೇಳಿ ಬರುತ್ತಿದೆ‌. ಕೆಲಸ ಮಾಡುವವರಿಗೆ ಮತ ನೀಡುತ್ತೇವೆ ಎಂದು ಎಲ್ಲ ಪಕ್ಷದವರು ಹೇಳುತ್ತಿದ್ದಾರೆ’ ಎಂದರು.

ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಾಮಸಂದ್ರ ಪ್ರಕಾಶ್‌ ಮಾತನಾಡಿ ‘ಡಿ.ಕೆ.ಸುರೇಶ್‌ ಅವರ ಅಭಿವೃದ್ಧಿ ಕೆಲಸಗಳಿಂದ ಅವರಿಗೆ ಕ್ಷೇತ್ರದಲ್ಲಿ ವಿರೋಧವಿಲ್ಲ. ಚುನಾವಣೆಯಲ್ಲಿ ಬಿಜೆಪಿಗೆ ಬೂತ್‌ ಏಜೆಂಟರುಗಳೇ ಇಲ್ಲ. ಒಮ್ಮತದ ಅಭ್ಯರ್ಥಿ ಸುರೇಶ್‌ ಅತಿ ಹೆಚ್ಚಿನ ಮತ ಗಳಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಮುದ್ದೇಗೌಡ, ತುಂಗಣಿ ರವಿ, ಸಿದ್ದೇಗೌಡ, ನಾಗೇಶ್‌, ಶ್ರೀಧರ್‌, ನಟೇಶ್‌, ಮರೀಗೌಡ, ತಮ್ಮಣ್ಣ, ರಾಮಲಿಂಗೇಗೌಡ, ಚಂದ್ರು, ರಾಣಿ, ಸುರೇಂದ್ರ, ವೆಂಕಟರಮಣಪ್ಪ, ಶೇಖರ್‌, ಗಣೇಶ್‌, ಅನೇಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.