ಮಾಗಡಿ: ‘ಗ್ರಾಮೀಣ ಭಾಗದ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸಹಾಯ ಮಾಡುವುದು ಎಲ್ಲರ ಕರ್ತವ್ಯವಾಗಬೇಕು’ ಎಂದು ಡಿವಿಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಡಿವಿಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಮತ್ತು ಸ್ಪೋಟೋನಿಕ್ಸ್ ಕಂಪನಿ ವತಿಯಿಂದ ನೀಡಿರುವ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದೇಶ್ವರ ಮಾತನಾಡಿ, ‘ಇಂದು ಸಂಗ್ರಹಿಸಿ ಇಡುವುದೇ ಹೆಚ್ಚಾಗಿದೆ. ಹೀಗಿರುವಾಗ ಚಿ.ಬಿ.ಅಶೋಕ್ ಅವರು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಮೆಚ್ಚುಗೆಯ ಸಂಗತಿ. ಸ್ಯಾಮ್ಸಂಗ್ ಕಂಪನಿಯವರು ತಾಲ್ಲೂಕಿನ ಎಲ್ಲ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ಸ್ಪೋಟೋನಿಕ್ಸ್ ಕಂಪನಿ ಮಾಲೀಕರಾದ ಜಮುನಾ ಅಶೋಕ್ ಮಾತನಾಡಿ, ‘ನಾವುಗಳೂ ಕೂಡ ಗ್ರಾಮೀಣ ಭಾಗದಿಂದ, ನಗರಕ್ಕೆ ತೆರಳಿ ಬದುಕು ಕಟ್ಟಿಕೊಂಡಿದ್ದೇವೆ. ಗ್ರಾಮೀಣ ಹಾಗೂ ರೈತಾಪಿವರ್ಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುವ ಉದ್ದೇಶ ನಮ್ಮದು. ಹಾಗಾಗಿ ಈ ಅಳಿಲು ಸೇವೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ, ಪೋಷಕರಿಗೆ ಕೀರ್ತಿ ತರಬೇಕು’ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರತಿನಿಧಿ ಎಂ.ಕೆಂಪೇಗೌಡ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ಲೋಕೇಶ್,ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾಡಬಾಳ್ ಶಿವರಾಮಯ್ಯ, ಮುಖ್ಯ ಶಿಕ್ಷಕಿ ತಬಸುಮ್ ಕೌಸರ್, ಮುಖ್ಯ ಶಿಕ್ಷಕ ಪುಟ್ಟಶಾಮಯ್ಯ, ಬಿಆರ್ಪಿ ಮುನಿಯಪ್ಪ, ಶಿಕ್ಷಕರಾದ ರಾಮಕೃಷ್ಣಯ್ಯ, ಬಿ.ಎನ್.ಜಯರಾಮ್, ಚಿಕ್ಕವೀರಯ್ಯ ಮಾತನಾಡಿದರು.
ಮಾಲತಮ್ಮ, ಮಾಧವಿ ಜತ್ತಕರ್, ವಿಜಯಲಕ್ಷ್ಮೀ, ಮಧುಗಿರಿಗೌಡ, ಜಿಜಿಎಂಎಸ್ ಮತ್ತು ಜಿಕೆಬಿಎಂಎಸ್ ಶಾಲೆಯ ಮಕ್ಕಳು, ಶಿಕ್ಷಕರು ಇದ್ದರು. ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.