ರಾಮನಗರ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಕನಕಪುರ ಮಾತಾ ಆಸ್ಪತ್ರೆ ಆಕ್ಸಿಜನ್ ಸಿಲಿಂಡರ್ಗಳು ಪತ್ತೆ
ಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆಸ್ಪತ್ರೆಯ ಜಿಲ್ಲಾ ಶಸ್ತ್ತಚಿಕಿತ್ಸಕ ಡಾ.ಶಶಿಧರ್ ಅವರ ಪತ್ನಿ ಒಡೆತನದ ಕನಕಪುರದ ಮಾತಾ ಆಸ್ಪತ್ರೆಯ 9 ಆಮ್ಲಜನಕ ಸಿಲಿಂಡರ್ಗಳನ್ನು ಜಿಲ್ಲಾಸ್ಪತ್ರೆ ಅಡುಗೆಮನೆಯಲ್ಲಿ ತಂದಿರಿಸಿದ್ದರು. ಈ ವಿಚಾರ ಸಾರ್ವಜನಿಕರ ಗಮನಕ್ಕೆ ಬಂದ ನಂತರ, ಎಚ್ಚೆತ್ತುಕೊಂಡ ಅವರು ಅಷ್ಟು ಸಿಲಿಂಡರ್ಗಳನ್ನು ಏಕಾಏಕಿ ತಮ್ಮ ಕಾರಿಗೆ ಶಿಫ್ಟ್ ಮಾಡಿದ್ದಾರೆ. 9 ಸಿಲಿಂಡರ್ಗಳ ಪೈಕಿ 6 ದೊಡ್ಡ ಹಾಗೂ 3 ಸಣ್ಣ ಪ್ರಮಾಣದವು ಎಂದು ಹೇಳಲಾಗುತ್ತಿದೆ.
ಇಲ್ಲಿ ಪತ್ತೆಯಾಗಿರುವ ಆಕ್ಸಿಜನ್ ಸಿಲಿಂಡರ್ಗಳನ್ನು ಸರ್ಕಾರದ ಹಣದಲ್ಲೇ ರೀಫಿಲ್ ಮಾಡಲು ತರಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಜಿಲ್ಲಾಸ್ಪತೆಯಲ್ಲಿ ವಾರಕೊಮ್ಮೆ ಆಮ್ಲಜನಕ ಸಿಲಿಂಡರ್ಗಳನ್ನು ತುಂಬುವ ಕೆಲಸ ಮಾಡಲಾಗುತ್ತದೆ. ದೊಡ್ಡ ಸಿಲಿಂಡರ್ಗಳಿಗೆ 900 ಹಾಗೂ ಸಣ್ಣ ಸಿಲಿಂಡರ್ಗಳಿಗೆ ₹600 ವೆಚ್ಚವಾಗುತ್ತಿದೆ. ಈ ಕುರಿತು ಡಾ. ಶಶಿಧರ್ ಪ್ರತಿಕ್ರಿಯಿಸಿ ‘ಕನಕಪುರದ ತಮ್ಮ ಪತ್ನಿ ಕ್ಲಿನಿಕ್ನಿಂದ ಕಾರಿನಲ್ಲಿ ರಾತ್ರಿ ಸಿಲಿಂಡರ್ಗಳನ್ನು ತರಲಾಗಿತ್ತು. ಬೆಳಗ್ಗೆ ಅವುಗಳನ್ನು ಕಳುಹಿಸಲು ಮುಂದಾಗಿದ್ದೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗೂ ಮಾಹಿತಿ ನೀಡಿದ್ದೇನೆ’ ಎಂದು
ಹೇಳಿದ್ದಾರೆ.
ಆದರೆ, ಕನಕಪುರದಿಂದ ಇಲ್ಲಿ ಖಾಸಗಿ ಆಸ್ಪತ್ರೆಯ ಸಿಲಿಂಡರ್ಗಳನ್ನು ತಂದಿದ್ದಾದರೂ ಏಕೆ? ಎಂಬುದೇ ಜನರ ಪ್ರಶ್ನೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.