ರಾಮನಗರ: ‘ಮನೆ ಮನೆಗೆ ಇ-ಖಾತೆ’ ಅಭಿಯಾನ ಮುಂದುವರಿಸಿರುವ ನಗರಸಭೆಯು ಸೋಮವಾರ ನಗರದ ಕಾಯಿಸೊಪ್ಪಿನ ಬೀದಿಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನ ಆವರಣದಲ್ಲಿ ವಾರ್ಡ್ 3, 4 ಹಾಗೂ 5ರ ವ್ಯಾಪ್ತಿಯ ಪ್ರದೇಶಗಳಿಗೆ ಸಂಬಂಧಿಸಿದಂತೆ ಅಭಿಯಾನ ಹಮ್ಮಿಕೊಂಡಿತು.
ನಗರಸಭೆಯ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಪೌರಾಯುಕ್ತ ಡಾ. ಜಯಣ್ಣ, ಕಂದಾಯ ಇಲಾಖೆಯ ಅಧಿಕಾರಿಗಳು ದೇವಸ್ಥಾನದಲ್ಲಿ ಆವರಣದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಬೀಡು ಬಿಟ್ಟಿದ್ದರು. ಆನ್ಲೈನ್ನಲ್ಲಿ ಸಲ್ಲಿಕೆಯಾದ ಅರ್ಜಿಗಳ ಜೊತೆಗೆ ಹೊಸದಾಗಿಯೂ ಅರ್ಜಿ ಸ್ವೀಕರಿಸಿದರು. ಒಟ್ಟು 53 ಅರ್ಜಿಗಳನ್ನು ಸ್ವೀಕರಿಸಿದ ಅಧಿಕಾರಿಗಳು, ಗಂಟೆಯೊಳಗೆ ಇ–ಖಾತೆ ಸೃಜಿಸಿ 37 ಮಂದಿಗೆ ವಿತರಿಸಿದರು.
ಅರ್ಜಿದಾರರಿಗೆ ಇ–ಖಾತೆಗಳನ್ನು ವಿತರಿಸಿ ಮಾತನಾಡಿದ ಕೆ. ಶೇಷಾದ್ರಿ, ‘ಮಧ್ಯವರ್ತಿಗಳಿಲ್ಲದೆ ಇ–ಖಾತೆ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ನಗರಸಭೆಯ ಯಾವುದೇ ಕೆಲಸಕ್ಕೆ ದಲ್ಲಾಳಿಗಳನ್ನು ಸಂಪರ್ಕಿಸದೆ, ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಬೇಕು’ ಎಂದರು.
ಪೌರಾಯುಕ್ತ ಡಾ. ಜಯಣ್ಣ, ‘ಅಭಿಯಾನ ಕುರಿತು ಕರಪತ್ರಗಳನ್ನು ಹಂಚಿ ವಾರ್ಡ್ಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅಭಿಯಾನದಲ್ಲಿ ಎ ಮತ್ತು ಬಿ ಖಾತೆ ಸಹ ಮಾಡಿಕೊಡಲಾಗುವುದು. ಜುಲೈ 30ರಂದು ವಾರ್ಡ್ ಸಂಖ್ಯೆ 6, 7, 8 ಹಾಗೂ 9ಕ್ಕೆ ಸಂಬಂಧಿಸಿದ ಅಭಿಯಾನವು ಎಂ.ಜಿ. ರಸ್ತೆಯ ಕನ್ನಿಕಾ ಮಹಲ್ನಲ್ಲಿ ನಡೆಯಲಿದೆ’ ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಪಾರ್ವತಮ್ಮ, ಸೋಮಶೇಖರ್ ಮಣಿ, ಗಿರಿಜಮ್ಮ ಗುರುವೇಗೌಡ, ಪದ್ಮ ಜಯರಾಂ, ಗೋವಿಂದರಾಜು, ನಗರಸಭೆಯ ಅಧಿಕಾರಿಗಳಾದ ಕಿರಣ್, ಆರ್. ನಾಗರಾಜು, ಪ್ರಸನ್ನ, ರೇಖಾ, ವೇದ, ಆನಂದ್, ಮುಖಂಡರಾದ ಶಿವಕುಮಾರಸ್ವಾಮಿ, ಚಂದ್ರು, ಗೂಳಿ ಕುಮಾರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.