ADVERTISEMENT

ಚನ್ನಪಟ್ಟಣ: ಮುನಿರತ್ನ ಶಾಸಕಸ್ಥಾನ ವಜಾಗೊಳಿಸಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 7:20 IST
Last Updated 18 ಸೆಪ್ಟೆಂಬರ್ 2024, 7:20 IST
ಶಾಸಕ ಮುನಿರತ್ನ ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಚನ್ನಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಉಪ ತಹಶೀಲ್ದಾರ್ ಲಕ್ಷ್ಮಿದೇವಮ್ಮ ರಿಗೆ ಮನವಿಪತ್ರ ನೀಡಿದರು
ಶಾಸಕ ಮುನಿರತ್ನ ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಚನ್ನಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಉಪ ತಹಶೀಲ್ದಾರ್ ಲಕ್ಷ್ಮಿದೇವಮ್ಮ ರಿಗೆ ಮನವಿಪತ್ರ ನೀಡಿದರು   

ಚನ್ನಪಟ್ಟಣ: ದಲಿತ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿ, ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾದ ಮುನಿರತ್ನ ಅವರು ಒಕ್ಕಲಿಗ ಜನಾಂಗ ಮತ್ತು ದಲಿತ ಜನಾಂಗದ ಬಗ್ಗೆ ಜಾತಿ ನಿಂದನೆ ಮಾಡಿ ಮಹಿಳೆಯರ ಬಗ್ಗೆ ಅವಾಚ್ಯ ಪದ ಪ್ರಯೋಗ ಮಾಡಿರುವುದು ಖಂಡನೀಯ. ಇಂತಹ ನೀಚ ಮನಸ್ಥಿತಿಯುಳ್ಳ ವ್ಯಕ್ತಿ ಶಾಸಕನಾಗಿರಲು ಆನರ್ಹನಾಗಿದ್ದು ಕೊಡಲೇ ಅತನನ್ನು ರಾಜ್ಯಪಾಲರು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯ ಶೋಷಿತ ಸಮುದಾಯ ವೇದಿಕೆ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಶಾಸಕ ಮುನಿರತ್ನ ಕೊಲೆ ಬೆದರಿಕೆ ಹಾಕಿರುವ ಜೊತೆಗೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಖಂಡನೀಯ. ಇಂತಹ ವ್ಯಕಿಗಳು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ. ಕೊಡಲೇ ರಾಜ್ಯಪಾಲರು ಈತನ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಒಬ್ಬ ಶಾಸಕ ತನ್ನ ಇತಿಮಿತಿಯನ್ನು ಮರೆತು ಬಾಯಿಗೆ ಬಂದಂತೆ ಮಾತನಾಡಿದರೂ ಆತನ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸಲಾಗುತ್ತಿದೆ. ಇದೆಲ್ಲವನ್ನು ನೋಡಿದಾಗ ದೇಶ ಮತ್ತು ರಾಜ್ಯ ಯಾವ ಕಡೆ ಸಾಗುತ್ತಿದೆ, ನಮ್ಮನ್ನು ಆಳುವವರ ಮನಸ್ಥಿತಿ ಹೇಗೆ ಬದಲಾಗುತ್ತಿದೆ ಎಂಬುದು ಅರ್ಥವಾಗುತ್ತದೆ ಎಂದರು.

ADVERTISEMENT

ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ರಸ್ತೆತಡೆ ನಡೆಸಿ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಬಳಿಗೆ ಬಂದ ಪ್ರತಿಭಟನಾಕಾರರು ಉಪ ತಹಶೀಲ್ದಾರ್ ಲಕ್ಷ್ಮಿದೇವಮ್ಮ ರಿಗೆ ಮನವಿಪತ್ರ ನೀಡಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಅಕ್ಕೂರು ಶೇಖರ್, ದಲಿತಪರ ಸಂಘಟನೆಗಳ ವೆಂಕಟೇಶ್, ಬಿವಿಎಸ್ ಕುಮಾರ್, ವಕೀಲ ಕುಮಾರ್, ಸಿದ್ದರಾಮಯ್ಯ, ಕೋಟೆ ಸಿದ್ದರಾಮು, ಅಪ್ಪಗೆರೆ ಶ್ರೀನಿವಾಸಮೂರ್ತಿ, ಚಂದ್ರು, ಚಿಕ್ಕೇನಹಳ್ಳಿ ಶಿವರಾಂ, ಪಾಪಣ್ಣ, ನಾರಾಯಣಮೂರ್ತಿ, ಕೇಶವಮೂರ್ತಿ, ಚಕ್ಕೆರೆ ಲೋಕೇಶ್, ಬಸವರಾಜು, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.