ADVERTISEMENT

ರಾಮನಗರ: ಅನೂಪ್‌ ಶೆಟ್ಟಿ ವರ್ಗಾವಣೆ, ಗಿರೀಶ್‌ ಹೊಸ ಎಸ್ಪಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 15:57 IST
Last Updated 3 ಸೆಪ್ಟೆಂಬರ್ 2020, 15:57 IST
ಅನೂಪ್‌ ಶೆಟ್ಟಿ
ಅನೂಪ್‌ ಶೆಟ್ಟಿ   

ರಾಮನಗರ: ಜಿಲ್ಲೆಯಲ್ಲಿ ಖಡಕ್‌ ಅಧಿಕಾರಿ ಎಂದೇ ಹೆಸರು ಮಾಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ವರ್ಗಾವಣೆಗೊಂಡಿದ್ದಾರೆ. ಅವರ ಜಾಗಕ್ಕೆ ನೂತನ ಎಸ್ಪಿಯಾಗಿ ಗಿರೀಶ್‌ ಬರಲಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರ ಗುರುವಾರ ಸಂಜೆ ಆದೇಶ ಹೊರಡಿಸಿದೆ. ಮೀಸಲು ಪೊಲೀಸ್‌ ಪಡೆಯ 9ನೇ ಬೆಟಾಲಿಯನ್ ನ ಕಮಾಂಡೆಂಟ್‌ ಎಸ್.ಗಿರೀಶ್ ಅವರನ್ನು ರಾಮನಗರ ಜಿಲ್ಲೆಯ ನೂತನ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅನೂಪ್‌ ಶೆಟ್ಟಿ ಅವರನ್ನು ಗಿರೀಶ್‌ ಇದ್ದ ಜಾಗಕ್ಕೆ ವರ್ಗಾಯಿಸಲಾಗಿದೆ.

ಕಳೆದ ಒಂದು ವರ್ಷ ಕಾಲ ಜಿಲ್ಲೆಯ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಅನೂಪ್‌ ಶೆಟ್ಟಿ ತಮ್ಮ ಕಾರ್ಯವೈಖರಿಯಿಂದ ಎಲ್ಲರ ಗಮನ ಸೆಳೆದಿದ್ದರು. ಜಿಲ್ಲೆಯಲ್ಲಿನ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ, ಗಾಂಜಾ ಮಾರಾಟ, ಜೂಜು ಸೇರಿದಂತೆ ಸಾಕಷ್ಟು ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಹಲವು ರಾಜಕೀಯ ಒತ್ತಡಗಳನ್ನು ಮೆಟ್ಟಿ ನಿಂತಿದ್ದರು. ಲಾಕ್‌ಡೌನ್‌ ಕಾಲದಲ್ಲಿ ಫೇಸ್‌ಬುಕ್, ಟ್ವಿಟರ್ ಲೈವ್‌ ಮೂಲಕ ಸಾರ್ವಜನಿಕರಿಗೆ ಸಾಕಷ್ಟು ಹತ್ತಿರವಾಗಿದ್ದರು. ಇಲಾಖೆಯೊಳಗಿನ ಸಿಬ್ಬಂದಿಯ ಭ್ರಷ್ಟಾಚಾರಕ್ಕೂ ಅವರು ಕಡಿವಾಣ ಹಾಕಿದ್ದರು. ಇದೇ ಅವರ ವರ್ಗಾವಣೆಯೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ಶುಭಾ ವರ್ಗಾವಣೆ
ರಾಮನಗರ ನಗರಸಭೆ ಆಯುಕ್ತೆ ಶುಭಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಅವರನ್ನು ತುಮಕೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ.

ಕಳೆದ ಎರಡು ವರ್ಷ ಕಾಲ ನಗರಸಭೆ ಆಯುಕ್ತರಾಗಿದ್ದ ಶುಭಾ ಹಲವು ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ನಗರಸಭೆ ಆಡಳಿತ ಮಂಡಳಿಯ ಅಧಿಕಾರವಧಿ ಮುಗಿದು ವರ್ಷವಾಗಿದ್ದು, ತಾವೇ ಪೂರ್ಣ ಪ್ರಮಾಣದ ಜವಾಬ್ದಾರಿ ನಿರ್ವಹಿಸಿದ್ದರು. ಶುಭಾ ಜಾಗಕ್ಕೆ ಸದ್ಯ ಸರ್ಕಾರ ಹೊಸ ಅಧಿಕಾರಿಯನ್ನು ನಿಯೋಜನೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.