ADVERTISEMENT

ಗೋಡೆ ಕುಸಿದು ಮಹಿಳೆ ಸಾವು

ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:14 IST
Last Updated 9 ನವೆಂಬರ್ 2021, 8:14 IST
ಚನ್ನಪಟ್ಟಣ ತಾಲ್ಲೂಕಿನ ನಾಯಕನ ತಾಂಡ್ಯ ಗ್ರಾಮದಲ್ಲಿ ಕುಸಿದು ಬಿದ್ದಿರುವ ಗುಡಿಸಲಿನ ಗೋಡೆ
ಚನ್ನಪಟ್ಟಣ ತಾಲ್ಲೂಕಿನ ನಾಯಕನ ತಾಂಡ್ಯ ಗ್ರಾಮದಲ್ಲಿ ಕುಸಿದು ಬಿದ್ದಿರುವ ಗುಡಿಸಲಿನ ಗೋಡೆ   

ಚನ್ನಪಟ್ಟಣ: ತಾಲ್ಲೂಕಿನ ಮೆಣಸಿಗನಹಳ್ಳಿ ಬಳಿಯ ನಾಯಕನ ತಾಂಡ್ಯ ಗ್ರಾಮದಲ್ಲಿ ಗುಡಿಸಲಿನ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಗೌರಿಬಾಯಿ (55) ಮೃತಪಟ್ಟವರು. ಈಕೆ ಗ್ರಾಮದ ಡಾಕುನಾಯ್ಕ ಎಂಬುವರ ಪತ್ನಿ. ಗುಡಿಸಲನ್ನು ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಗೋಡೆ ಇವರ ಮೇಲೆ ಕುಸಿದು ಬಿದ್ದು ಈ ದುರ್ಘಟನೆನಡೆದಿದೆ.

ಗುಡಿಸಲು ಹಾಳಾಗಿದ್ದ ಕಾರಣ ಕಾರ್ಮಿಕರಿಂದ ದುರಸ್ತಿ ಮಾಡಿಸಲಾಗುತ್ತಿತ್ತು. ಮನೆಯಲ್ಲಿದ್ದ ಅವರ ಮೇಲೆ ಗೋಡೆ ಕುಸಿದು ಬಿದ್ದಿದೆ.

ADVERTISEMENT

ಇಟ್ಟಿಗೆ ಹಾಗೂ ಮಣ್ಣಿನ ರಾಶಿಯಲ್ಲಿ ಸಿಕ್ಕಿಕೊಂಡು ಅವರು ಉಸಿರುಗಟ್ಟಿ ತೀವ್ರವಾಗಿ ಗಾಯಗೊಂಡಿದ್ದರು.

ತಕ್ಷಣ ಇಟ್ಟಿಗೆ, ಮಣ್ಣು ಸರಿಸಿ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕಳೆದ ಹಲವು ದಿನಗಳಿಂದ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯಿಂದ ಗುಡಿಸಲಿನ ಗೋಡೆಗಳು ಶಿಥಿಲಗೊಂಡಿದ್ದವು ಎಂದು ತಿಳಿದುಬಂದಿದೆ. ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಗ್ರಾಮದಲ್ಲಿ ಸೋಮವಾರ ಅಂತ್ಯಸಂಸ್ಕಾರ ನಡೆಸಲಾಯಿತು.

ಸೂಕ್ತ ಪರಿಹಾರಕ್ಕೆ ಒತ್ತಾಯ: ಈಚೆಗೆ ಸುರಿದ ಭಾರಿ ಮಳೆಯಿಂದ ಗುಡಿಸಲಿನ ಗೋಡೆಯು ಸಂಪೂರ್ಣ ಶಿಥಿಲಗೊಂಡಿದ್ದರಿಂದ ಇಂತಹ ದುರ್ಘಟನೆ ನಡೆದಿದೆ. ಮೃತ ಗೌರಿಬಾಯಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಲಂಬಾಣಿ ಸಮುದಾಯದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರನಾಯ್ಕ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.