ರಾಮನಗರ: ಸರ್ಕಾರದ ಯೋಜನೆಗಳು ಸಾಕಾರಗೊಳ್ಳಲು ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇರಬೇಕು ಎಂದು ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಪಾಂಡುರಂಗ ಹೇಳಿದರು.
ಇಲ್ಲಿನ ಕವಣಾಪುರ ಗ್ರಾಮದಲ್ಲಿ ನಡೆದ ಗ್ರಾಮಸಭೆ ಮತ್ತು 2019-20 ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಗ್ರಾಮೀಣಾಭಿವೃಧ್ಧಿಗೆ ಒತ್ತು ನೀಡಿದ್ದು ವಿವಿಧ ಇಲಾಖೆಗಳ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಗತಗೊಳಿಸುತ್ತಿದೆ. ಕಾಲಕಾಲಕ್ಕೆ ವಿವಿಧ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ತಿಳುವಳಿಕೆ ನೀಡಿ ಸಾರ್ವಜನಿಕರಿಗೆ ಪ್ರತೀ ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ಮಾಹಿತಿ ನೀಡಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ರೈತರ ಏಳಿಗೆಗಾಗಿ ಇರುವ ಹತ್ತು ಹಲವಾರು ಕಾರ್ಯಕ್ರಮಗಳ ಯೋಜನೆಗಳ ಸಾಕಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗ್ರಾಮ ಪಂಚಾಯಿತಿ ಜತೆಗೆ ಕೈಜೋಡಿಸಬೇಕು. ಇಲಾಖೆಗಳಲ್ಲಿ ಸಿಗುವ ಸವಲತ್ತುಗಳನ್ನು ನೇರವಾಗಿ ಫಲಾನುಭವಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ಪ್ರತಿ ಗ್ರಾಮಸಭೆಗೆ ಆಯಾ ಇಲಾಖಾವಾರು ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿ ಅವರು ಸರ್ಕಾರದ ಸೌಲಭ್ಯ ಪಡೆಯಲು ನೆರವಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ ಕೆ. ಶಿವಲಿಂಗಯ್ಯ ಮಾತನಾಡಿ ಗ್ರಾಮೀಣಾಭಿವೃದ್ಧಿ ಸರ್ಕಾರದ ಮೂಲ ಮಂತ್ರವಾಗಿದೆ. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುವಲ್ಲಿ ಎಲ್ಲಾ ಇಲಾಖೆಗಳ ಪಾತ್ರ ಮಹತ್ವದ್ದಿದೆ ಎಂದು ತಿಳಿಸಿದರು.
ಸಾಮಾಜಿಕ ಲೆಕ್ಕಪರಿಶೋಧನಾ ತಾಲ್ಲೂಕು ಸಂಯೋಜಕಿ ಶಿವಮ್ಮ ನರೇಗಾ ಯೋಜನೆಯ ವಿವರ ಕೆಲಸಗಳು, ಫಲಾನುಭವಿಗಳ ವಿವರವನ್ನು ಸಭೆಗೆ ಓದಿ ತಿಳಿಸಿದರು. ಇದೇ ಸಂಧರ್ಭದಲ್ಲಿ ಕೈಲಾಂಚ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ವರ್ಗಾವಣೆಯಾದ ಡಾ. ಉಮಾ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಸಿಲ್ಕ್ ಸಿಟಿ ಕ್ಲಬ್ ಅಧ್ಯಕ್ಷ ಎ.ಜೆ. ಸುರೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭವ್ಯ ಸುರೇಂದ್ರ, ಸದಸ್ಯರಾದ ಜಿ.ಪಿ. ಗಿರೀಶ್, ವರದರಾಜು, ಬೋರಯ್ಯ, ಭಾನುಮತಿ, ಸೋಮಶೇಖರ್, ಗಿರಿಜಾ ವರದರಾಜು, ಪಿಡಿಒ ಸತೀಶ್, ಡಾ. ತುಳಸಿರಾಮ್, ತೋಟಗಾರಿಕೆ ಅಧಿಕಾರಿ ಅನಿಲ್ ಕುಮಾರ್, ರೇಷ್ಮೆ ಅಧಿಕಾರಿ ತಿಮ್ಮೇಗೌಡ, ಪಶು ಇಲಾಖೆಯ ಜಾನುವಾರು ಅಧಿಕಾರಿ ಕರಿಯಪ್ಪ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಿವಮ್ಮ, ಆರೋಗ್ಯ ಇಲಾಖೆ ರಾಜೇಶ್, ನರೇಗಾ ಎಂಜಿನಿಯರ್ ಹೇಮಂತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.