ಬೆದರಿಕೆ ಕರೆ– ಪ್ರವಾಸ ಹೊರಟ ಬಿಜೆಪಿ ಅಭ್ಯರ್ಥಿಗಳು
ಪ್ರಜಾವಾಣಿ ವಾರ್ತೆ Published 2 ನವೆಂಬರ್ 2019, 14:53 IST Last Updated 2 ನವೆಂಬರ್ 2019, 14:53 IST ಪ್ರವಾಸ ಹೊರಟಿರುವ ನಗರಸಭೆ ಬಿಜೆಪಿಯ 26 ಅಭ್ಯರ್ಥಿಗಳು
ಕನಕಪುರ: ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ. ಒತ್ತಡ ತಂತ್ರ ಅನುಸರಿಸುತ್ತಿದ್ದು ಅವರಿಂದ ಅಭ್ಯರ್ಥಿಗಳನ್ನು ರಕ್ಷಿಸಲು ಪ್ರವಾಸ ಹೊರಟಿರುವುದಾಗಿ ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗಾನಂದ ತಿಳಿಸಿದ್ದಾರೆ.
‘ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ ನಾಮಪತ್ರ ಸಲ್ಲಿಸಿರುವ ಪಕ್ಷದ 26 ಅಭ್ಯರ್ಥಿಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ. ನೀವು ನಾಮಪತ್ರ ವಾಪಸ್ ಪಡೆಯದಿದ್ದರೆ ತೊಂದರೆ ಮಾಡುವುದಾಗಿ ಎಚ್ಚರಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣೆ ಎಂದ ಮೇಲೆ ಸ್ಪರ್ಧೆ ಇರುತ್ತದೆ. ಆ ಸ್ಪರ್ಧೆಯಲ್ಲಿ ಜನಮತದಿಂದ ಗೆಲ್ಲಬೇಕೇ ಹೊರತು ಮತ್ತೊಂದು ಪಕ್ಷದವರನ್ನು ಹೆದರಿಸಿ ಬೆದರಿಸಿ ನಾಮಪತ್ರವನ್ನೇ ಹಿಂಪಡೆಯುವಂತೆ ಮಾಡಿ ಅವಿರೋಧವಾಗಿ ಆಯ್ಕೆಮಾಡಿಕೊಳ್ಳಲು ಅಡ್ಡದಾರಿ ಹಿಡಿಯುವುದು ಸರಿಯಲ್ಲ’ ಎಂದರು.
‘ಇದನ್ನು ಮತದಾರ ಪ್ರಭುಗಳು ಒಪ್ಪುವುದಿಲ್ಲ. ಪಕ್ಷದ ಅಭ್ಯರ್ಥಿಗಳಿಗೆ ಒತ್ತಡ ಹೇರಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗುತ್ತಿದೆ. ಆ ಕಾರಣದಿಂದಲೇ ನಾವು ನಾಮಪತ್ರ ಹಿಂಪಡೆಯುವ ದಿನ ಮುಗಿದ ಮೇಲೆ ವಾಪಸ್ ಬರುತ್ತೇವೆ’ ಎಂದು ಅವರು ತಿಳಿಸಿದ್ದಾರೆ.